ಭೋಪಾಲ್ ಡಿ 16 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ವಿರುದ್ದ ಹೋರಾಡುತ್ತಿದ್ದೇನೆ. ಅವರ ಮೇಲೆ ನನಗೆ ಯಾವುದೇ ಅಂತರಾಳದ ದ್ವೇಷವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಯ ಇದ್ದಲ್ಲಿ ಅದು ದ್ವೇಷವಾಗಿ ಪರಿವರ್ತನೆಯಾಗುತ್ತದೆ. ಆದರೆ ನನಗೆ ಅಂತಹ ಭಯವಾಗಲೀ, ದ್ವೇಷವಾಗಲೀ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮೇಲೆ ಅಂತರಾಳದಲ್ಲಿ ನನಗೆ ಯಾವುದೇ ದ್ವೇಷವಿಲ್ಲ ಎಂದರು.
ನನ್ನ ಅಂತರಾಳದಲ್ಲಿ ಪ್ರೀತಿಗಷ್ಟೇ ಜಾಗ. ಭಯದಿಂದ ಪ್ರೀತಿ ಅಸಾಧ್ಯ. ಹಾಗೆ ನೋಡಿದರೆ ನಮ್ಮ ದೇಶದ ಡಿಎನ್ಎಯಲ್ಲಿಯೇ ದ್ವೇಷ, ಭಯಕ್ಕೆ ಜಾಗವಿಲ್ಲ. ಪ್ರೀತಿ, ಸಹಾನುಭೂತಿಗಷ್ಟೇ ಅಲ್ಲಿ ಜಾಗ. ಹೀಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರೆಸ್ಸೆಸ್ಗೂ ನಾನು ಸಲಹೆ ನೀಡುವುದೆಂದರೆ ಭಯವನ್ನು ಬಿಟ್ಟು ಬಿಡಿ ಎಂಬುದಾಗಿ ಎಂದು ರಾಹುಲ್ ಗಾಂಧಿ ಹೇಳಿದರು.
ನನ್ನ ಅಜ್ಜಿ ಇಂದಿರಾ ಗಾಂಧಿಯವರ ದೇಹಕ್ಕೆ 32 ಗುಂಡು ಹೊಕ್ಕಿದ್ದವು. ಬಾಂಬ್ ಸ್ಪೋಟಿಸಿ ನನ್ನ ತಂದೆಯನ್ನು ಹತ್ಯೆಗೈಯಲಾಯಿತು. ಹಿಂಸಾಚಾರ ನನ್ನ ವಿರುದ್ದವೂ ನಡೆದಿದೆ. ಆದರೆ ನನಗೆ ಭಯ ಎಂಬುದಿಲ್ಲ ಎಂದವರು ಪ್ರತಿಪಾದಿಸಿದರು.