ಬೆಂಗಳೂರು, ಡಿ 16 (DaijiworldNews/DB): ಕಾಂಗ್ರೆಸ್ ಪಕ್ಷವು ದೇಶಭಕ್ತರ ಪರವೋ ಅಥವಾ ಉಗ್ರರ ಪರವೋ ಎಂಬುದನ್ನು ಎಐಸಿಸಿ ನಾಯಕರು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲೆಸೆದಿದ್ದಾರೆ.
ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ವಿಜಯ್ ದಿವಸ್ ಆಚರಣೆ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ತಮ್ಮ ಪಕ್ಷ ದೇಶಭಕ್ತರ ಪರವಾಗಿದೆಯೇ ಅಥವಾ ಭಯೋತ್ಪಾದಕರ ಪರವಾಗಿದೆಯೇ ಎಂದು ಮೊದಲು ಬಹಿರಂಗವಾಗಿ ಹೇಳಲಿ. ಉಗ್ರರ ಬಗ್ಗೆ ಅವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣದ ಶಂಕಿತ ಉಗ್ರನನ್ನು ಸಾಕ್ಷಿಸಮೇತ ಬಂಧಿಸಲಾಗಿದೆ. ಆತನಿಗೆ ಭಯೋತ್ಪಾದಕ ಸಂಘಟನೆಗಳ ನಂಟಿರುವುದೂ ತನಿಖೆಯಲ್ಲಿ ಗೊತ್ತಾಗಿದೆ. ಭಯೋತ್ಪಾದಕನ ಬಗ್ಗೆ ಅನುಕಂಪ ತೋರಿಸುವುದರಿಂದ ಅಲ್ಪಸಂಖ್ಯಾತರ ಮತ ಸಿಗಬಹುದು ಎಂಬ ಲೆಕ್ಕಾಚಾರ ಡಿ.ಕೆ. ಶಿವಕುಮಾರ್ ಅವರದ್ದು. ಈ ಕಾರಣಕ್ಕಾಗಿಯೇ ಅವರು ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಇಂತಹ ಓಲೈಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೀಕಿಸುವುದೇ ಕಾಂಗ್ರೆಸ್ ಕಾಯಕ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಅವರಿಂದ ನಡೆಯುತ್ತಿದೆ. ಆದರೆ ಅವರ ಮಾತು ನಂಬಲು ಜನ ಮೂರ್ಖರಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು. ಹಿರಿಯ ರಾಜಕಾರಣಿಯಾಗಿರುವ ಡಿಕೆಶಿ ಮಾತನಾಡುವ ಮೊದಲು ವಿಷಯ ತಿಳಿದುಕೊಳ್ಳಬೇಕು ಎಂದರು.