ದಾವಣೆಗೆರೆ, ಡಿ 16( DaijiworldNews/MS): ಮೊಬೈಲ್ ಸ್ಫೋಟಗೊಂಡು ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜರ್ಮನಿಯಲ್ಲಿ ಸಂಭವಿಸಿದೆ.
ಮೃತರನ್ನು ದಾವಣಗೆರೆ ಸರಸ್ವತಿ ನಗರದ ಕೆ.ರೇವಪ್ಪ, ಎ. ಇಂದಿರಮ್ಮ ಅವರ ಪುತ್ರ, ಜರ್ಮಿನಿಯ ಕೆಮ್ನಿಟ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಓದುತ್ತಿದ್ದ ಸಂತೋಷ್ಕುಮಾರ್ ಕೆ.ಆರ್. (30) ಎಂದು ಗುರುತಿಸಲಾಗಿದೆ.
ಈಗಾಗಲೇ ಓರ್ವ ಪುತ್ರನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದ ದಂಪತಿಗಳಿಗೆ ಇದೀಗ ಇನ್ನೋರ್ವ ಮಗನ ಸಾವು ಕಂಗೆಡಿಸಿದೆ.
ಸಂತೋಷ್ ತುಮಕೂರಿನಲ್ಲಿ ಬಿಇ ಪದವಿ ಪಡೆದಿದ್ದು ಎಂಎಸ್ ಮಾಡಲು ಜರ್ಮನಿಗೆ ಹೋಗುವ ಮೊದಲು ಮೂರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು.
‘ಜರ್ಮಿನಿಯ ಕೆಮ್ನಿಟ್ಸ್ ನಗರದ ಪಿ.ಜಿ. ಒಂದರಲ್ಲಿ ವಾಸ್ತವ್ಯ ಹೂಡಿದ್ದ ಸಂತೋಷ್ಕುಮಾರ್, ರಾತ್ರಿ ಮಲಗುವ ವೇಳೆ ಮೊಬೈಲ್ ಅನ್ನು ಚಾರ್ಜ್ಗೆ ಇಟ್ಟಿದ್ದರು. ಆಗ ಸ್ಫೋಟ ಸಂಭವಿಸಿ, ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿದೆ. ಇದರಿಂದ ಕೊಠಡಿಯಲ್ಲಿ ಹೊಗೆ ಆವರಿಸಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಶೀತ ಗಾಳಿ ಹೆಚ್ಚಿರುವ ಕಾರಣ ಕೊಠಡಿ ಬಾಗಿಲು ಸಂಪೂರ್ಣ ಬಂದ್ ಮಾಡಿದ್ದರಿಂದ ವಿಷ ಗಾಳಿ ಸೇವಿಸಿ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಮೃತರ ಸಂಬಂಧಿ ವಿವರಿಸಿದ್ದಾರೆ.