ಬೆಂಗಳೂರು, ಡಿ 16( DaijiworldNews/MS): ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಕಾಂಗ್ರೆಸ್ ಮತ್ತೊಂದು ಆಂತರಿಕ ಸಮೀಕ್ಷೆ ಮಾಡಿಸಿದೆ. ಈ ಕುರಿತು ಶಿವಕುಮಾರ್ ಮಾಹಿತಿ ನೀಡಿದ್ದು, ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗುಜರಾತ್ಗೆ ಹೋಲಿಸಲು ಸಾಧ್ಯವಿಲ್ಲ.ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, " ನಮ್ಮ ಪಕ್ಷ 136 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಬಿಜೆಪಿಗೆ 66 ಸ್ಥಾನಗಳು ಸಿಗಲಿದೆ. ಮತದಾರರು ಈಗಾಗಲೇ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ರೋಸಿ ಹೋಗಿದ್ದು, ಕಾಂಗ್ರೆಸ್ ನಿಂದ ಶುದ್ದ , ಉತ್ತಮವನ್ನು ಸರ್ಕಾರವನ್ನು ನಿರೀಕ್ಷಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಸಮೀಕ್ಷೆ ಮಾಡಿಸಿದ್ದೆ. ಜೆಡಿಎಸ್ ಎಷ್ಟು ಸ್ಥಾನ ಗೆಲ್ಲಲಿದೆಯೊ ಗೊತ್ತಿಲ್ಲ. ಅದನ್ನು ಆಮೇಲೆ ಹೇಳುತ್ತೇನೆ ಎಂದು ಹೇಳಿದ ಅವರು, ನಾನು ಮಾತ್ರ ಅಲ್ಲದೇ ರಾಷ್ಟ್ರೀಯ ನಾಯಕರೂ ಈಗಾಗಲೇ ಫಲಿತಾಂಶದ ಕುರಿತು ಸಮೀಕ್ಷೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.