ಬೆಂಗಳೂರು, ಡಿ 15 (DaijiworldNews/SM): ಮಂಗಳೂರು ಸ್ಫೋಟ ಹಾಗೂ ಮತದಾರರ ದತ್ತಾಂಶ ದುರ್ಬಳಕೆ ಹಿಂದಿನ ಸತ್ಯ ಬಯಲಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿಯಾಗಿ ಟ್ವೀಟ್ ಮಾಡುವ ಮೂಲಕ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 'ರಾಷ್ಟ್ರೀಯ ಭದ್ರತೆಯ ಸಮಸ್ಯೆಯಿಂದಾಗಿ ಕರ್ನಾಟಕದಲ್ಲಿ ಮತದಾರರ ಮಾಹಿತಿ ದುರ್ಬಳಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕೃತ್ಯದ ಹಿಂದೆ ಕೈಯಾಡಿಸಿರುವವರ ವಿರುದ್ಧ ಯುಎಪಿಎ ಕಾನೂನಿನಡಿಯಲ್ಲಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅವ್ಯವಹಾರದ ಬಗ್ಗೆ ಸಮರ್ಪಕ ತನಿಖೆ ನಡೆಸಿ ನ್ಯಾಯವೊದಗಿಸುವಂತೆ ಕಾಂಗ್ರೆಸ್ ಆಗ್ರಹಿಸುತ್ತಿದೆ. ಮಂಗಳೂರು ಸ್ಪೋಟವೇ ಆಗಲಿ, ಮತದಾರರ ಮಾಹಿತಿ ಕಳ್ಳತನವೇ ಆಗಲಿ ಅದರ ವಿರುದ್ಧ ಕಾಂಗ್ರೆಸ್ ಸಮರ ಸಾರುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.