ಬೆಂಗಳೂರು, ಡಿ 08 (DaijiworldNews/DB): ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳ ಬಗ್ಗೆ ಡಿ.ಕೆ. ಶಿವಕುಮಾರ್ ಅನುಕಂಪ ವ್ಯಕ್ತಪಡಿಸಿದ್ದಾರೆ. ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆಶಿಯವರು ಮತ ರಾಜಕಾರಣದ ದುರುದ್ದೇಶದಿಂದ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಸುತ್ತಿ ಬಳಸಿ ಮಾತನಾಡುವ ಬದಲು ದೇ ಆರ್ ಮೈ ಬ್ರದರ್ಸ್ ಎಂದು ಉಗ್ರ ಕೃತ್ಯ ಎಸಗುವವರನ್ನೆಲ್ಲ ಹೇಳಲಿ ಎಂದು ಸವಾಲೆಸೆದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಟ್ವೀಟ್ ಬಗ್ಗೆ ಅನುಮಾನಿಸಿರುವ ಡಿಕೆಶಿಯವರು ಈ ತನಿಖೆಯನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮೂಲಕ ಮಾಡಿಸಬೇಕೆಂದು ಇಚ್ಛಿಸಿದ್ದಾರೆಯೇ ಎಂದು ಇದೇ ವೇಳೆ ಸುನಿಲ್ ಕುಮಾರ್ ಪ್ರಶ್ನಿಸಿದರು.