ಪಾಟ್ನಾ, ಡಿ 15 (DaijiworldNews/DB): ನೀನು ನಕಲಿ ಮದ್ಯಪಾನ ಮಾಡಿದರೆ ನೀನೇ ಸಾಯುತ್ತೀಯಾ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ಮದ್ಯಪಾನಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತಪಟ್ಟ ದುರಂತದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮದ್ಯ ಸೇವನೆ ಮಾಡುವ ಬಡವರನ್ನು ಬಂಧಿಸುವ ಬದಲು ಅದನ್ನು ತಯಾರಿಸುವ ಹಾಗೂ ವ್ಯಾಪಾರ ಮಾಡುವವರನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ನಕಲಿ ಮದ್ಯ ತಯಾರಕರಿಂದ ಮದ್ಯ ಪಡೆದು ಸೇವಿಸಿ 39 ಮಂದಿ ಮೃತಪಟ್ಟಿದ್ದಾರೆ. ನೀನು ಮದ್ಯ ಸೇವಿಸಿದರೆ ನೀನೇ ಸಾಯುತ್ತೀಯ ಎಂದವರು ಖಡಕ್ ಆಗಿ ಹೇಳಿದರು.
ಬಿಹಾರದಲ್ಲಿ ಮದ್ಯ ನಿಷೇಧಿಸಿದ ಬಳಿಕ ಹಲವರಿಗೆ ಪ್ರಯೋಜನವಾಗಿದೆ. ಸ್ವಯಂಪ್ರೇರಿತವಾಗಿ ಹಲವರು ಮದ್ಯಪಾನ ತ್ಯಜಿಸಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವರು ವಾಮ ಮಾರ್ಗ ಹಿಡಿದು ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅಂತಹವರ ವಿರುದ್ದ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.