ನವದೆಹಲಿ, ಡಿ 15 (DaijiworldNews/DB): ಭಾರತ ಮತ್ತು ಚೀನಾ ಸೈನಿಕರ ನಡುವೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಡೆದ ಘರ್ಷಣೆ ಕುರಿತು ಅಧಿವೇಶನದಲ್ಲಿ ಚರ್ಚಿಸಲು ವಿಪಕ್ಷಗಳು ಎಷ್ಟೇ ಒತ್ತಾಯಿಸಿದರೂ ಕೇಂದ್ರ ಸರ್ಕಾರ ಚರ್ಚೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗುರುವಾರ ಟ್ವೀಟ್ ಮಾಡಿರುವ ಅವರು, ಡಿಸೆಂಬರ್ 9ರಂದು ತವಾಂಗ್ ನಲ್ಲಿ ಉಭಯ ಸೈನಿಕರ ನಡುವೆ ಘರ್ಷಣೆ ಉಂಟಾಗಿದೆ.ಆದರೆ ವಿಪಕ್ಷಗಳ ಹಲವು ಬಾರಿಯ ಒತ್ತಾದ ಹೊರತಾಗಿಯೂ ಈ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಬಹುಶಃ ಮೋದಿ ಸರ್ಕಾರ ತನ್ನ ಕೆಂಪು ಕಣ್ಣನ್ನು ಚೀನಾ ಕನ್ನಡಕದಿಂದ ಮುಚ್ಚಿಕೊಂಡಿರುವುದೇ ಇದಕ್ಕೆ ಕಾರಣವಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಕಾಮಾಲೆ ಕಣ್ಣಿಗೆ ಲೋಕವೇ ಹಳದಿಯಾಗಿ ಕಾಣುವಂತೆ ಮೋದಿ ಸರ್ಕಾರವೂ ತನ್ನ ಕೆಂಪು ಕಣ್ಣಿಗೆ ಚೀನಾ ಕನ್ನಡಕ ಹಾಕಿರುವುದರಿಂದ ಚೀನಾ ಪರವಾಗಿಯೇ ತೋರುತ್ತಿದೆ ಎಂದೆನಿಸುತ್ತಿದೆ. ಹೀಗಾಗಿ ಭಾರತದ ಸಂಸತ್ತಿನಲ್ಲಿ ಚೀನಾ ಪರ ಮಾತಾಡಲು ಅವಕಾಶ ಇಲ್ಲದಂತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೀನೀ ಸೈನಿಕರು ಭಾರತದ ಭೂಭಾಗ ಅತಿಕ್ರಮಿಸಲು ಬಂದಾಗ ಭಾರತೀಯ ಸೈನಿಕರು ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು ಎಂಬುದಾಗಿ ಡಿಸೆಂಬರ್11ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ವಿವರಿಸಿದ್ದಾರೆ. ಆದರೆ ವಿಪಕ್ಷಗಳಿಗೆ ಅವರ ವಿವರ ಸಮಾಧಾನ ತಾರದ ಕಾರಣ 17 ವಿಪಕ್ಷಗಳು ಚರ್ಚೆಗೆ ಒತ್ತಾಯಿಸುತ್ತಿವೆ. ಆದರೆ ಇದಕ್ಕೆ ಸ್ಪೀಕರ್ ಅವಕಾಶ ನೀಡಿಲ್ಲ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.