ಮಂಡ್ಯ, ಡಿ 15 (DaijiworldNews/DB): ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರೇ ಸೇರಿ ಧರ್ಮದೇಟು ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಚಿನ್ಮಯ ಆನಂದ ಮೂರ್ತಿ ವಿದ್ಯಾರ್ಥಿಗಳಿಂದ ಥಳಿಸಲ್ಪಟ್ಟ ಮುಖ್ಯ ಶಿಕ್ಷಕ. ಈತ ಹಾಸ್ಟೆಲ್ ವಿದ್ಯಾರ್ಥಿನಿಯೋರ್ವಳೊಂದಿಗೆ ತಡರಾತ್ರಿ ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೇ ಆಕೆ ಸಹಪಾಠಿಗೆ ವಿಷಯ ತಿಳಿಸಿದ್ದಾಳೆ. ತತ್ ಕ್ಷಣ ವಿದ್ಯಾರ್ಥಿನಿಯರೆಲ್ಲ ಸೇರಿ ಕೈಯಲ್ಲಿ ಕೋಲು, ದೊಣ್ಣೆ ಹಿಡಿದು ಬಂದು ಕಾಮುಕ ಶಿಕ್ಷಕನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಇನ್ನು ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಆತನ ಮೊಬೈಲ್ ಪರಿಶೀಲಿಸಿದಾಗ ಶಿಕ್ಷಕನ ಕಾಮ ಪುರಾಣದ ಮತ್ತಷ್ಟು ಮಾಹಿತಿ ಗೊತ್ತಾಗಿದೆ. ಶಿಕ್ಷಕಿಯೊಬ್ಬರನ್ನೂ ಈತ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದು, ಇದರ ವೀಡಿಯೋಗಳನ್ನು ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ. ಆ ವೀಡಿಯೋವನ್ನು ವಿದ್ಯಾರ್ಥಿನಿಯರಿಗೆ ತೋರಿಸಿ ತನ್ನೊಂದಿಗೆ ಸಹಕರಿಸದಿದ್ದರೆ ಪರೀಕ್ಷೆಯಲ್ಲಿ ನಾಪಾಸು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇನ್ನು ಕಾಮುಕ ಶಿಕ್ಷಕನನ್ನು ಹುದ್ದೆಯಿಂದ ವಜಾಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಧೈರ್ಯದಿಂದ ಶಿಕ್ಷಕನ ಕೃತ್ಯವನ್ನು ಬಹಿರಂಗಗೊಳಿಸಿದ ವಿದ್ಯಾರ್ಥಿನಿಯರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸಚಿವರು ತಿಳಿಸಿರುವುದಾಗಿ ವರದಿಯಾಗಿದೆ.