ಉತ್ತರಪ್ರದೇಶ, ಡಿ 15 (DaijiworldNews/DB): ಮದ್ಯಪಾನಿಯೊಬ್ಬ ಎರಡು ನಾಯಿಮರಿಗಳ ಬಾಲ ಮತ್ತು ಕಿವಿ ಕತ್ತರಿಸಿ ಉಪ್ಪು ಸೇರಿಸಿ ಸ್ನ್ಯಾಕ್ಸ್ ಮಾಡಿಕೊಂಡು ತಿಂದ ವಿಲಕ್ಷಣ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಫರೀದ್ ಪುರ ಪ್ರದೇಶದ ಎಸ್ ಡಿಎಂ ಕಾಲೊನಿಯಲ್ಲಿ ನಡೆದಿದೆ.
ಮುಖೇಶ್ ವಾಲ್ಮೀಕಿ ಎಂಬಾತ ಆರೋಪಿಯಾಗಿದ್ದು, ಈತ ಇನ್ನೊಬ್ಬ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುವ ವೇಳೆ ಕೃತ್ಯ ಎಸಗಿದ್ದಾನೆ. ಧೀರಜ್ ಪಾಠಕ್ ಎಂಬವರು ಈ ವಿಚಾರವನ್ನು ಪೀಪಲ್ಸ್ ಫಾರ್ ಅನಿಮಲ್ ಸಂಘಟನೆಯ ಗಮನಕ್ಕೆ ತಂದಿದ್ದು, ಇಬ್ಬರ ವಿರುದ್ದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಯು ಒಂದು ನಾಯಿ ಮರಿಯ ಬಾಲವನ್ನೂ, ಇನ್ನೊಂದು ನಾಯಿ ಮರಿಯ ಕಿವಿಯನ್ನೂ ಕತ್ತರಿಸಿದ್ದಾನೆ. ಬಳಿಕ ಅದಕ್ಕೆ ಉಪ್ಪು ಹಾಕಿ ಎಣ್ಣೆ ಬೆರೆಸಿಕೊಂಡು ಸೇವಿಸಿದ್ದಾನೆ.
ಬಾಲ ಮತ್ತು ಕಿವಿ ಕತ್ತರಿಸಿದ್ದರಿಂದಾಗಿ ನಾಯಿಮರಿಗಳೆರಡು ರಕ್ತಸ್ರಾವ ಮತ್ತು ನೋವಿನಿಂದ ನರಳಾಡಿವೆ. ಸದ್ಯ ಎರಡೂ ಮರಿಗಳ ಸ್ಥಿತಿ ಚಿಂತಾಜನಕವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.