ನವದೆಹಲಿ, ಡಿ 15 (DaijiworldNews/HR): ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ಗೆ ಆತಿಥ್ಯ ನೀಡಿದ ಮತ್ತು ನೆರೆ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶವು ಭಾರತಕ್ಕೆ ಪ್ರವಚನ ಮಾಡುವ ಅರ್ಹತೆಯನ್ನು ಹೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಅವರು, ನಾವು ಇಂದು ಬಹುಪಕ್ಷೀಯತೆಯನ್ನು ಸುಧಾರಿಸುವ ತುರ್ತುಸ್ಥಿತಿಯ ಮೇಲೆ ಗಮನಹರಿಸಿದ್ದೇವೆ. ನಾವು ನಮ್ಮ ನಿರ್ದಿಷ್ಟ ಅಭಿಪ್ರಾಯವನ್ನು ಹೊಂದಿದ್ದೇವೆ ಎಂದರು.
ಇನ್ನು ನಾವು ಉತ್ತಮ ಪರಿಹಾರಗಳನ್ನು ಹುಡುಕುತ್ತಿರುವ ಸಂದರ್ಭದಲ್ಲಿ ಅಂತಹ ಬೆದರಿಕೆಗಳನ್ನು ಎಂದಿಗೂ ಒಪ್ಪಿಕೊಳ್ಳಬಾರದು. ಜಗತ್ತು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುವದನ್ನು ಸಮರ್ಥಿಸುವ ಪ್ರಶ್ನೆಯೂ ಉದ್ಭವಿಸಬಾರದು. ಇದು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ಖಂಡಿತವಾಗಿಯೂ ಅನ್ವಯಿಸುತ್ತದೆ ಎಂದಿದ್ದಾರೆ.