ರಾಮನಗರ, ಡಿ 14 (DaijiworldNews/DB): ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದು. ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸ್ವತಂತ್ರ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುವುದೇ ನನ್ನ ಆದ್ಯತೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ವಿಚಾರವಾಗಿ ಆಗಾಗ ಪ್ರಸ್ತಾಪವಾಗುತ್ತಿದೆ. ಆದರೆ ನಾನೆಂದೂ ಸ್ವಾರ್ಥಿ ಆಗಲಾರೆ. ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತೇನೆಯೇ ಹೊರತು ನನ್ನ ಸ್ಪರ್ಧೆ ವಿಷಯದಲ್ಲಲ್ಲ. ಈ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾನು ಬದ್ದ, ಜನವರಿಯಲ್ಲಿ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿದ್ದು, ಯುವಶಕ್ತಿಯನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದರು.
ಪಂಚರತ್ನ ರಥಯಾತ್ರೆಯು ಡಿಸೆಂಬರ್ 15ರಂದು ರಾಮನಗರ ಜಿಲ್ಲೆಯನ್ನು ಪ್ರವೇಶಿಸಲಿದ್ದು, ಅಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ. ರಥ ಹೋದ ಕಡೆಯಲೆಲ್ಲಾ ಜನ ನಮಗೆ ಬೆಂಬಲಿಸಿದ್ದಾರೆ. ಇನ್ನು ಜನ ರಾಮನಗರ ಜಿಲ್ಲೆಯಲ್ಲಿ ಯಾವ ರೀತಿ ಬೆಂಬಲಿಸುತ್ತಾರೆಂಬುದನ್ನು ರಾಜ್ಯವೇ ನೋಡುತ್ತಿದೆ ಎಂದವರು ತಿಳಿಸಿದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಡಿಸೆಂಬರ್ 16ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ತಿರುಪತಿಯ ಮೂಲ ವಿಗ್ರಹ ತಂದು ಅದ್ದೂರಿ ಶ್ರೀನಿವಾಸ ಕಲ್ಯಾಣ ಧಾರ್ಮಿಕ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಇದು ಪಕ್ಷಾತೀತವಾಗಿದ್ದು, ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ತಿರುಪತಿ ತಿಮ್ಮಪ್ಪ ದೇವಳದ ಅರ್ಚಕರಿಂದಲೇ ಪೂಜೆ ನೆರವೇರುತ್ತದೆ ಎಂದವರು ವಿವರಿಸಿದರು.