ಗೋರಖ್ಪುರ(ಉತ್ತರಪ್ರದೇಶ), ಡಿ 14 (DaijiworldNews/DB): ಅಂತ್ಯಕ್ರಿಯೆಗೆ ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬ ತನ್ನ ತಾಯಿಯ ಶವವನ್ನು ಮನೆಯಲ್ಲೇ ಬಚ್ಚಿಟ್ಟ ಘಟನೆ ಗುಲ್ರಿಹಾ ಪ್ರದೇಶದಲ್ಲಿ ನಡೆದಿದೆ.
ನಿವೃತ್ತ ಸರಕಾರಿ ಶಿಕ್ಷಕಿ ಶಾಂತಿ ದೇವಿ (82) ಸುಮಾರು ನಾಲ್ಕೈದು ದಿನಗಳ ಹಿಂದೆ ಮೃತಪಟ್ಟಿದ್ದು, ಅವರ ಪುತ್ರ 45 ವರ್ಷದ ನಿಖಿಲ್ ಮಿಶ್ರಾ ಅಲಿಯಾಸ್ ಡಬ್ಬು ಎಂಬಾತ ತಾಯಿಯ ಶವವನ್ನು ಅಂತ್ಯಕ್ರಿಯೆ ನಡೆಸದೆ ಮನೆಯಲ್ಲೇ ಬಚ್ಚಿಟ್ಟಿದ್ದ. ಈತ ಮದ್ಯವ್ಯಸನಿಯಾಗಿದ್ದು, ಮಾನಸಿಕವಾಗಿಯೂ ಸ್ಥಿರತೆ ಹೊಂದಿರಲಿಲ್ಲ. ಮಂಗಳವಾರ ಮನೆಯಿಂದ ತೀರಾ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆಸುಪಾಸಿನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಶವವನ್ನು ಮನೆಯಲ್ಲೇ ಇಟ್ಟುಕೊಂಡಿರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಮನೋಜ್ ಕುಮಾರ್ ಅವಸ್ತಿ ತಿಳಿಸಿದ್ದಾರೆ.
ಇನ್ನು ನಿಖಿಲ್ ಮಿಶ್ರಾನನ್ನು ವಿಚಾರಣೆ ನಡೆಸಿದಾಗ ಐದು ದಿನಗಳ ಹಿಂದೆ ತಾಯಿ ಮೃತಪಟ್ಟಿದ್ದಾರೆ. ಹಣಕಾಸಿನ ಕೊರತೆಯಿಂದಾಗಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾನೆ. ಆತ ಮಾನಸಿಕ ಅಸ್ವಸ್ಥನಾಗಿರುವುದರಿಂದ ಹೆಚ್ಚಿನ ಮಾಹಿತಿ ಅಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.