ನವದೆಹಲಿ, ಡಿ 14 (DaijiworldNews/DB): ಬಂಗಾಳದ ಬಿರ್ಭೂಮ್ ಗ್ರಾಮದಲ್ಲಿ ನಡೆದ ಅಗ್ನಿಸ್ಪರ್ಶ ಮತ್ತು ಹಿಂಸಾಚಾರದಲ್ಲಿ ಸುಮಾರು 10 ಮಂದಿ ಬಲಿಯಾದ ಪ್ರಕರಣ ಸಂಬಂಧಿಸಿದ ಆರೋಪಿಯೊಬ್ಬನ ಶವ ತಾತ್ಕಾಲಿಕ ಕೇಂದ್ರ ತನಿಖಾ ದಳದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಲಾಲನ್ ಶೇಖ್ ಸಾವನ್ನಪ್ಪಿದ ಆರೋಪಿ. ಈತ ಡಿಸೆಂಬರ್ ಆರಂಭದಲ್ಲಿ ಬಂಗಾಳ-ಜಾರ್ಖಂಡ್ ಗಡಿಯಲ್ಲಿನ ಅಡಗುತಾಣದಿಂದ ಬಂಧಿಸಲ್ಪಟ್ಟಿದ್ದ. ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ ಪ್ರದೇಶದ ಅತಿಥಿ ಗೃಹದಲ್ಲಿ ಏಜೆನ್ಸಿ ಸ್ಥಾಪಿಸಿರುವ ಕಚೇರಿಯ ವಾಶ್ರೂಮ್ನಲ್ಲಿ ಸೋಮವಾರ ಈತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶೇಖ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಸಂಜೆ 4.30 ರ ಸುಮಾರಿಗೆ ತಾತ್ಕಾಲಿಕ ಕಚೇರಿಯ ವಾಶ್ರೂಂನಲ್ಲಿ ಆತ ನೇಣು ಬಿಗಿದುಕೊಂಡಿದ್ದಾನೆ. ಆ ವೇಳೆ ಓರ್ವ ತನಿಖಾಧಿಕಾರಿ ನ್ಯಾಯಾಲಯದಲ್ಲಿದ್ದರೆ, ಸಿಆರ್ಪಿಎಫ್ ಕಾನ್ಸ್ಟೇಬಲ್ವೊಬ್ಬರು ವಾಶ್ರೂಂನ ಹೊರಗಿದ್ದರು. ಘಟನೆ ಸಂಬಂಧ ಪೊಲೀಸರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ಆತನನ್ನು ಸಿಬಿಐ ಕಸ್ಟಡಿಗೆ ಒಳಪಡಿಸಿದ ಬಳಿಕ ಚಿತ್ರಹಿಂಸೆ ನೀಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.