ನವದೆಹಲಿ, ಡಿ 13 ( DaijiworldNews/MS): ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತ್ಯೇಕ ಬಸ್ ಯಾತ್ರೆಗೆ ಕಾಂಗ್ರೆಸ್ ಹೈಕಮಾಂಡ್ ತಡೆಯೊಡ್ಡಿದ್ದು, ಒಗ್ಗಟ್ಟಾಗಿ ಒಂದೇ ತಂಡದಲ್ಲಿ ಬಸ್ ಯಾತ್ರೆ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಸಿದ್ದರಾಮಯ್ಯ ಅವರು ಬೀದರ್ನಿಂದ ಜನವರಿ 3ರಿಂದ ಬಸ್ ಯಾತ್ರೆ ಪ್ರಾರಂಭಿಸಲು ತೀರ್ಮಾನಿಸಿದ್ದರು. ಇತ್ತ ಡಿಕೆ ಶಿವಕುಮಾರ್ ಸಹ ಮೈಸೂರು ಭಾಗದ ಕಡೆ ಯಾತ್ರೆ ಮಾಡಲು ಬಸ್ ಸಿದ್ಧಪಡಿಸಿದ್ದರು. ಆದರೆ ಈ ಪ್ರತ್ಯೇಕ ಬಸ್ ಯಾತ್ರೆಗೆ ಅನುಮತಿ ನಿರಾಕರಿಸಿರುವ ಹೈಕಮಾಂಡ್ , "ಪ್ರತ್ಯೇಕ ಬಸ್ ಯಾತ್ರೆಯಿಂದ ತಪ್ಪು ಸಂದೇಶ ರವಾನೆಯಾಗುತ್ತೆ. ಇದರಿಂದ ಪಕ್ಷದಲ್ಲಿ ಭಿನ್ನಮತವಿದೆ ಎಂಬ ವದಂತಿಗೆ ಪುಷ್ಟಿ ನೀಡಿದಂತೆ ಆಗುತ್ತದೆ. ಹೀಗಾಗಿ ಒಗ್ಗಟ್ಟಾಗಿ ಬಸ್ ಯಾತ್ರೆ ಕೈಗೊಳ್ಳಿ" ಎಂದು ಸಲಹೆ ನೀಡಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ, ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಸಲು ನಿನ್ನೆ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿತ್ತು. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ರ್ಯಾಲಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಒಂದೇ ತಂಡದಲ್ಲಿ ಮೊದಲು 150 ಕ್ಷೇತ್ರಗಳಲ್ಲಿ ಯಾತ್ರೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರಕ್ಕೂ ಹೈಕಮಾಂಡ್ ಫುಲ್ ಸ್ಟಾಪ್ ಇಟ್ಟಿದ್ದು, ಯಾರನ್ನೂ ಕೂಡ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಿದೆ.ಚುನಾವಣೆ ಬಳಿಕ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತೇವೆ, ಅಲ್ಲಿವರೆಗೂ ಈ ಬಗ್ಗೆ ಚರ್ಚೆ ಬೇಡ ಎಂದು ಹೈಕಮಾಂಡ್ ಈ ವಿಚಾರಕ್ಕೆ ತೆರೆ ಎಳೆದಿದೆ.