ಬೆಂಗಳೂರು, ಡಿ 12 (DaijiworldNews/SM): ರಾಜ್ಯದಲ್ಲಿ ಎದುರಾಗಿರುವ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸರಕಾರದ ಕಡೆಯಿಂದ ಕ್ರಮಕೈಗೊಳ್ಳಲಾಗುವುದೆಂದು ಸಚಿವ ಎನ್.ಮುನಿರತ್ನ ಹೇಳಿದ್ದಾರೆ.
ಅಡಿಕೆ ಬೆಳೆಗೆ ತಗುಲಿದ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಅನುಭವಿ ರೈತರೊಬ್ಬರು ನೀಡಿದ ಸಲಹೆಯನ್ನು ಜಾರಿ ಮಾಡಲಾಗುವುದು. ಅದಕ್ಕಾಗಿ 15 ಕೋಟಿ ರೂ. ಹಣ ನೀಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತೋಟಗಾರಿಕೆ ಸಚಿವ ಎನ್. ಮುನಿರತ್ನ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಪೀಡಿತ ಅಡಿಕೆ ತೋಟಗಳಿಗೆ ಸಚಿವ ಮುನಿರತ್ನ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ರೋಗ ನಿಯಂತ್ರಣದ ಪರಿಹಾರ ಕುರಿತು ವಿವರಿಸಿದರು.
ರಾಜ್ಯದ ಏಳು ಜಿಲ್ಲೆಗಳಲ್ಲಿ ಅಡಿಕೆ ಮರಗಳಿಗೆ ಈ ಎಲೆ ಚುಕ್ಕಿ ರೋಗ ಕಾಣಿಸಿಕೊಳ್ಳುವ ಮೂಲಕ ಬೆಳೆಗಾರರನ್ನು ಆತಂಕಕ್ಕೆ ನೂಕಿದೆ. ಈ ಎಲೆಚುಕ್ಕಿ ರೋಗವು ಕೊಲೆಟೋಟ್ರೈಕಂ ಗ್ಲಿಯೋಸ್ಪೊಯಿರೈಡಿಸ್ ಶಿಲೀಂಧ್ರದಿಂದ ಬರುತ್ತದೆ. ರೋಗಬಾಧಿತ ಸೋಗೆಗಳ (ಎಲೆ) ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆಗಳು ಕಾಣಿಸುತ್ತವೆ. ರೋಗ ಈ ಪೀಡಿತ ಎಲೆಗಳನ್ನು ಸಮಗ್ರವಾಗಿ ಕತ್ತರಿಸಿ ತೆಗೆದು ಬೆಂಕಿಯಲ್ಲಿ ಸುಟ್ಟು ನಾಶಪಡಿಸಿದರೆ ಮಾತ್ರ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ. ಇದು ರೋಗ ನಿಯಂತ್ರಣಕ್ಕೆ ನೆರವಾಗಬಹುದು ಎಂದು ಚರ್ಚಿಸಿ ತೀರ್ಮಾನಿಸಲಾಗಿದೆ.