ತೆಲಂಗಾಣ, ಡಿ 11 (DaijiworldNews/DB): ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎಂಟು ದಿನಗಳ ಅವಳಿ ಶಿಶುಗಳಿಗೆ ತೆಲಂಗಾಣ ಸಚಿವರೊಬ್ಬರು ಶೀಘ್ರ ಚಿಕಿತ್ಸೆ ಲಭಿಸುವಂತೆ ಮಾಡಿದ್ದಲ್ಲದೆ, ಆಸ್ಪತ್ರೆ ಶುಲ್ಕ ಕಡಿತಗೊಳಿಸಿ ಶಿಶುಗಳ ಪ್ರಾಣ ಕಾಪಾಡಿದ್ದಾರೆ. ಸಚಿವರ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.
ತೆಲಂಗಾಣ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ಅವರೇ ಶಿಶುಗಳ ಪ್ರಾಣ ಉಳಿಸಿದವರು. ಹುಟ್ಟಿದ ಎಂಟೇ ದಿನಕ್ಕೆ ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎಂಟು ದಿನಗಳ ಅವಳಿ ಶಿಶುಗಳನ್ನು ತೆಲಂಗಾಣದ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಶುಗಳ ಸಕ್ಕರೆ ಮಟ್ಟ ಕುಸಿದಿದ್ದಲ್ಲದೆ, ಪ್ರತಿ 10ರಿಂದ 15 ಸೆಕೆಂಡುಗಳಿಗೆ ಉಸಿರಾಟವನ್ನೂ ಕಳೆದುಕೊಳ್ಳತೊಡಗಿದರು. ಕೂಡಲೇ ಶಿಶುಗಳ ತಂದೆ ಲಕ್ಷ್ಮಣ್ ಟಿ.ಎಚ್. ಅವರು ಸಚಿವ ಕೆಟಿಆರ್ ಅವರನ್ನು ಸಂಪರ್ಕಿಸಿ ಶಿಶುಗಳ ಪರಿಸ್ಥಿತಿ ವಿವರಿಸಿದರು.
ಶಿಶುಗಳ ಬಗ್ಗೆ ಮಾಹಿತಿ ತಿಳಿದುಕೊಂಡ ಸಚಿವ ಕೆಟಿಆರ್ ಕೂಡಲೇ ವಾರಂಗಲ್ನಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕಳುಹಿಸಲು ಸಹಾಯ ಮಾಡಿದರು. ಅಲ್ಲದೆ, ಚಿಕಿತ್ಸೆಗೆ 50 ಸಾವಿರ ರೂ. ರಿಯಾಯಿತಿಯನ್ನೂ ಮಾಡಿಕೊಟ್ಟರು. ಇದರಿಂದ ಶಿಶುಗಳಿಗೆ ಕ್ಷಿಪ್ರವಾಗಿ ಚಿಕಿತ್ಸೆ ದೊರೆತು ಚೇತರಿಸಿಕೊಂಡರಲ್ಲದೆ, ಒಂದೂವರೆ ಲಕ್ಷ ರೂ.ಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ತಂದೆ ಲಕ್ಷ್ಮಣ್ ಟಿ.ಎಚ್.
ಇದೀಗ ಎರಡೂ ಶಿಶುಗಳು ಆರೋಗ್ಯವಾಗಿದ್ದು, ಸಚಿವ ಕೆಟಿಆರ್ ಅವರು ಶಿಶುಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳು ಆರೋಗ್ಯವಾಗಿರುವುದನ್ನು ನೋಡುವುದಕ್ಕಿಂತ ಖುಷಿ ಬೇರೆ ಯಾವುದರಲ್ಲಿಯೂ ಇಲ್ಲ ಎಂದು ಇದೇ ವೇಳೆ ಅವರು ಬರೆದುಕೊಂಡಿದ್ದಾರೆ.