ಕೊಲ್ಲಂ, ಡಿ 11 (DaijiworldNews/DB): ಸೆಲ್ಫೀ ತೆಗೆದುಕೊಳ್ಳಲು ಹೋಗಿ ಕಣಿವೆಗೆ ಬಿದ್ದ ವಧುವನ್ನು ರಕ್ಷಿಸಲು ವರನೂ ಕಣಿವೆಗೆ ಹಾರಿ ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ಇದೀಗ ಅವರ ಮದುವೆಯೇ ಮುಂದೂಡಿಕೆಯಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕ್ವಾರಿಯ ಅಂಚಿನಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿರುವಾಗ ವಧು 120 ಅಡಿ ಆಳದ ಕಣಿವೆಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ವರನೂ ಕಣಿವೆಗೆ ಹಾರಿದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದೀಗ ಆ ಜೋಡಿಯ ಮದುವೆಯನ್ನೇ ಕುಟುಂಬಿಕರು ಮುಂದೂಡಿದ್ದಾರೆ. ಅದರಂತೆ ಡಿಸೆಂಬರ್ 9ರಂದು ನಡೆಯಬೇಕಿದ್ದ ವಿನು ಕೃಷ್ಣನ್ ಮತ್ತು ಕಲ್ಲಾವುತುಕ್ಕಲ್ ಗ್ರಾಮದ ಸಾಂಡ್ರಾ ಅವರ ಮದುವೆಯನ್ನು ಮುಂದೂಡಲಾಗಿದೆ. ಸದ್ಯ ವಧು-ವರ ಇಬ್ಬರೂ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಕುಟುಂಬಿಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿವಾಹದ ಹಿನ್ನೆಲೆಯಲ್ಲಿ ಸ್ಥಳೀಯ ದೇವಸ್ಥಾನವೊಂದಕ್ಕೆ ಪೂಜೆಗಾಗಿ ಕುಟುಂಬ ಸಮೇತ ತೆರಳಿದ್ದ ವಧು-ವರರು ಸಮೀಪದ ಐರವಳ್ಳಿ ಕ್ವಾರಿ ನೋಡಲು ತೆರಳಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಘಟನೆ ನಡೆದಿತ್ತು.