ಹೈದರಾಬಾದ್, ಡಿ 11 (DaijiworldNews/DB): ತೆಲಂಗಾಣ ರಾಜ್ಯಾದ್ಯಂತ ಪಾದಯಾತ್ರೆ ಮುಂದುವರಿಕೆಗೆ ಅವಕಾಶ ನಿರಾಕರಿಸಿರುವುದನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಹೂಡಿದ್ದ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ, ಆಂಧ್ರ ಸಿಎಂ ವೈ.ಎಸ್. ಜಗನ್ಮೋಹನ ರೆಡ್ಡಿ ಸಹೋದರಿ ವೈ.ಎಸ್. ಶರ್ಮಿಳಾ ಅಸ್ವಸ್ಥರಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶರ್ಮಿಳಾ ತೆಲಂಗಾಣದಾದ್ಯಂತ ಪಾದಯಾತ್ರೆಗೆ ನಿರ್ಧರಿಸಿದ್ದರಾದರೂ, ಇದಕ್ಕೆ ಕೆಸಿಆರ್ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದರಿಂದ ಶುಕ್ರವಾರದಿಂದ ವೈಎಸ್ಆರ್ಟಿಪಿ ಪಕ್ಷದ ಪ್ರಧಾನ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸತ್ಯಾಗ್ರಹ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರೂ, ಅವರು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದರು. ನೀರೂ ಸಹ ಸೇವಿಸದ ಹಿನ್ನೆಲೆಯಲ್ಲಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಶರ್ಮಿಳಾ ಅವರ ರಕ್ತದೊತ್ತಡ ಮತ್ತು ಗ್ಲುಕೋಸ್ ಮಟ್ಟ ಕುಸಿದಿದ್ದು, ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುವ ನಿರ್ಜಲೀಕರಣ ಸಮಸ್ಯೆ ಎದುರಾದಲ್ಲಿ ಮೂತ್ರಪಿಂಡಗಳಿಗೂ ಅಪಾಯವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ.