ಹೈದರಾಬಾದ್, ಡಿ 11 (DaijiworldNews/DB): ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ ಸಂಬಂಧಿಸಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಎಂಎಲ್ಸಿ ಕೆ ಕವಿತಾ ಅವರು ಇಂದು ಸಿಬಿಐ ವಿಚಾರಣೆಗೆ ಒಳಪಡಲಿದ್ದಾರೆ.
ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಕವಿತಾ ಅವರ ನಿವಾಸದಲ್ಲಿ ವಿಚಾರಣೆ ನಡೆಯಲಿದೆ. ಸಿಬಿಐ ವಿಚಾರಣೆ ಹಿನ್ನೆಲೆಯಲ್ಲಿ ಕವಿತಾ ನಿವಾಸದ ಬಳಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದ್ದು, ನಿವಾಸದ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಮನೆ ಸಮೀಪಕ್ಕೆ ತೆರಳುವ ಅವಕಾಶ ನಿರ್ಬಂಧಿಸಲಾಗಿದೆ.
ಇನ್ನು ಅನಗತ್ಯವಾಗಿ ಗುಂಪುಗೂಡದಂತೆ ಪಕ್ಷದ ಉನ್ನತ ನಾಯಕತ್ವದಿಂದ ಕಾರ್ಯಕರ್ತರಿಗೆ ಸೂಚನೆ ಬಂದಿದೆ ಎನ್ನಲಾಗಿದೆ. ಸಿಬಿಐ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಈ ಹಿಂದೆ ಡಿಸೆಂಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಕವಿತಾ ಅವರಿಗೆ ಸಿಬಿಐ ಸೂಚಿಸಿದ್ದರೂ, ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವುದರಿಂದ ಕಾಲಾವಕಾಶ ಕೋರಿ ಸಿಬಿಐಗೆ ಅವರು ಮನವಿ ಸಲ್ಲಿಸಿದ್ದರು. ಅಲ್ಲದೆ, ಡಿಸೆಂಬರ್ 11 ಮತ್ತು 15ರ ನಡುವೆ ವಿಚಾರಣೆಗೆ ತಮ್ಮ ನಿವಾಸಕ್ಕೆ ಬರಬಹುದು ಎಂಬುದಾಗಿಯೂ ಹೇಳಿದ್ದರು. ಅದರಂತೆ ಇಂದು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕವಿತಾ ನಿವಾಸಕ್ಕೆ ತೆರಳಲಿದ್ದಾರೆ.