ನವದೆಹಲಿ, ಡಿ 10 (DaijiworldNews/DB): ಭಾರತ್ ಜೋಡೋ ಯಾತ್ರೆ ಮೇಲೆ ಗುಜರಾತ್ ಚುನಾವಣೆ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಗುಜರಾತ್ ಚುನಾವಣೆಯಿಂದ ಭಾರತ್ ಜೋಡೋ ಯಾತ್ರೆ ಮೇಲೆ ಪರಿಣಾಮವಿಲ್ಲ. ಆದರೆ ಈ ಫಲಿತಾಂಶ ನಿರಾಸೆ ಮೂಡಿಸಿದೆ. ಪಕ್ಷದ ಕಳಪೆ ಸಾಧನೆ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು. ಆ ಬಳಿಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಗುಜರಾತ್ನಲ್ಲಿ ಚುನಾವಣೆ ಉದ್ದೇಶದಿಂದ ಸರ್ಕಾರಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆಮ್ ಆದ್ಮಿ ಪಕ್ಷ ಮತ್ತು ಎಐಎಂಐಎಂ ಮೈತ್ರಿ ಮೂಲಕ ಕಾಂಗ್ರೆಸ್ಗೆ ತೊಂದರೆ ನೀಡಲು ದೊಡ್ಡ ಪ್ರಯತ್ನ ನಡೆದಿತ್ತು ಎಂದವರು ಇದೇ ವೇಳೆ ಆರೋಪಿಸಿದರು.
ಮತ ಹಂಚಿಕೆ ಶೇ. 40 ರಿಂದ 27ಕ್ಕೆ ಕುಸಿದಿದೆ. ಆದರೆ ಶೇ. 27 ಮತ ಹಂಚಿಕೆ ಪಕ್ಷದ ಮೂಲವಾಗಿರುವುದರಿಂದ ಅದನ್ನು ಶೇ. 40ಕ್ಕೆ ಏರಿಸುವುದು ಅಸಾಧ್ಯವಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಸೋಲಿನ ಪರಾಮರ್ಶೆ ನಡೆಸಲಿದ್ದಾರೆ. ಮುಂದಿನ ಕ್ರಮಗಳ ಬಗ್ಗೆಯೂ ನಿರ್ಧರಿಸಲಿದ್ದಾರೆ ಎಂದವರು ತಿಳಿಸಿದರು.