ಶಿಮ್ಲಾ, ಡಿ 10 (DaijiworldNews/DB): ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಪ್ರಸ್ತುತ ಸಿಎಂ ರೇಸ್ನಿಂದ ಹೊರಗುಳಿದಿದ್ದಾರೆ.
ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ನಿನ್ನೆ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದರು. ಹೊಸದಾಗಿ ಆಯ್ಕೆಯಾದ 40 ಮಂದಿ ಶಾಸಕರಲ್ಲಿ ಪ್ರತಿಭಾ ಸಿಂಗ್ಗೆ ಬೆಂಬಲದ ಕೊರತೆ ಇರುವುದರಿಂದ ಅವರನ್ನು ಸಿಎಂ ರೇಸ್ನಿಂದ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪ್ರತಿಭಾ ಸಿಂಗ್, ಹೈಕಮಾಂಡ್ಗೆ ತಮ್ಮ ಹಕ್ಕು ಮಂಡಿಸಿದ್ದರು. ಪತಿ ವೀರಭದ್ರ ಸಿಂಗ್ ಹೆಸರಿನಲ್ಲಿ ಚುನಾವಣೆಗಳನ್ನು ಗೆದ್ದಿದ್ದೇನೆ. ಪಕ್ಷಕ್ಕಾಗಿ ಶ್ರಮಿಸಿದ ಅವರ ಕುಟುಂಬವನ್ನು ಅವಗಣಿಸುವುದು ಸರಿಯಲ್ಲ ಎಂದೂ ಹೇಳಿಕೆ ನೀಡಿದ್ದರು. ಆದರೆ ಶಾಸಕರ ಬೆಂಬಲದ ಕೊರತೆಯಿಂದಾಗಿ ಅವರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.
ಇನ್ನು ರಾಜ್ಯದ ಮಾಜಿ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಸುಖು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ 25ಕ್ಕೂ ಅಧಿಕ ಮಂದಿ ಶಾಸಕರ ಬೆಂಬಲವನ್ನು ಹೊಂದಿರುವುದರಿಂದ ಸಿಎಂ ರೇಸ್ನಲ್ಲಿದ್ದಾರೆ. ಇನ್ನೂ ಹಲವರು ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಾಗಿದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.