ಚೆನ್ನೈ, ಡಿ 10 (DaijiworldNews/DB): ಮಾಂಡೌಸ್ ಚಂಡ ಮಾರುತದಿಂದಾಗಿ ಉಂಟಾದ ಭಾರೀ ಮಳೆಗೆ ನಾಲ್ವರು ಬಲಿಯಾದ ಘಟನೆ ತಮಿಳುನಾಡಿನಲ್ಲಿ ಶನಿವಾರ ನಡೆದಿದೆ.
ಮಾಂಡೌಸ್ ಚಂಡಮಾರುತ ಪೀಡಿತ ಕಾಸಿಮೆಡು ಪ್ರದೇಶಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಭೇಟಿ ನೀಡಿ, ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದಿಂದಾಗಿ ಹಲವು ರೀತಿಯಲ್ಲಿ ನಷ್ಟ ಉಂಟಾಗಿದ್ದು, ಪ್ರಾಣಹಾನಿಯೂ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಚೆನ್ನೈಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ., ಇನ್ನು 98 ಜಾನುವಾರುಗಳೂ ಮಳೆಗೆ ಬಲಿಯಾಗಿವೆ. 151 ಮನೆಗಳು, ಗುಡಿಸಲು ಹಾನಿಗೊಳಗಾಗಿವೆ. ಚೆನ್ನೈ ನಗರದಲ್ಲಿ 400 ಮರಗಳು ಧರಾಶಾಹಿಯಾಗಿವೆ ಎಂಬುದಾಗಿ ಮಾಹಿತಿ ನೀಡಿದರು.
ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಯ ವಿವಿಧ ಪ್ರದೇಶಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳ ಜನರು ತೀರಾ ಸಂಕಷ್ಟಕ್ಕೊಳಗಾಗಿದ್ದಾರೆ. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುತ್ತಿದ್ದಾರೆ. ಬೃಹತ್ ಮರವೊಂದು ಪೆಟ್ರೋಲ್ ಬಂಕ್ ಮೇಲೆ ಉರುಳಿ ಬಿದ್ದಿದೆ. ಚೆನ್ನೈ ಟಿ ನಗರದಲ್ಲಿ ಗೋಡೆ ಕುಸಿದು ಪಾರ್ಕ್ ಮಾಡಲಾಗಿದ್ದ ಮೂರು ಕಾರುಗಳು ಜಖಂಗೊಂಡಿವೆ.