ಶ್ರೀನಗರ, ಡಿ 10 (DaijiworldNews/DB): ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ನ ನಾಲ್ವರು ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಶನಿವಾರ ಘೋಷಿಸಿದೆ.
ಪಾಕಿಸ್ತಾನಿ ಪ್ರಜೆಗಳಾದ ಸಲೀಮ್ ರೆಹಮಾನಿ ಅಲಿಯಾಸ್ 'ಅಬು ಸಾದ್', ಸೈಫುಲ್ಲಾ ಸಾಜಿದ್ ಜಟ್ ಮತ್ತು ಅವರ ಸ್ಥಳೀಯ ಸಹಚರರಾದ ಶ್ರೀನಗರದ ಸಜ್ಜದ್ ಗುಲ್ ಮತ್ತು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರೆಡ್ವಾನಿ ಪಯೀನ್ನ ಬಸಿತ್ ಅಹ್ಮದ್ ದಾರ್ ಎಂಬ ನಾಲ್ಕು ಉಗ್ರರ ಬಗ್ಗೆ ಮಾಹಿತಿ ನೀಡುವಂತೆ ಎನ್ಐ ಕಾಶ್ಮೀರದ ಹಲವು ಭಾಗಗಳಲ್ಲಿ ಪೋಸ್ಟರ್ಗಳನ್ನು ಅಂಟಿಸಿದೆ. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದೆ.
ಈ ನಾಲ್ವರು ಉಗ್ರರು ಜಮ್ಮು ಕಾಶ್ಮೀರದ ಯುವಕರನ್ನು ತಮ್ಮ ಭಾಗವಾಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು. ಅಲ್ಲದೆ ನೇಮಕಾತಿಯನ್ನೂ ಮಾಡಿಕೊಳ್ಳಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಉಗ್ರರು ಪತ್ತೆಯಾದಲ್ಲಿ ಅವರ ಮಾಹಿತಿ ಹಂಚಿಕೊಳ್ಳಲು ಎನ್ಐಎ ಇಮೇಲ್, ಫೋನ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸಂಖ್ಯೆಗಳನ್ನು ಪೋಸ್ಟರ್ನಲ್ಲಿ ಹಾಕಿದೆ. ಮಾಹಿತಿದಾರರ ಗುರುತು ರಹಸ್ಯವಾಗಿಡಲಾಗುವುದು ಎಂದೂ ಹೇಳಿದೆ.