ನವದೆಹಲಿ, ಡಿ 10 (DaijiworldNews/DB):1000 ಹಾಗೂ 500 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಉದ್ದೇಶ ಇನ್ನೂ ಈಡೇರಿಲ್ಲ. ನಕಲಿ ನೋಟುಗಳ ಹಾವಳಿಗೆ ಕಡಿವಾಣವೂ ಇಲ್ಲ, ಇತ್ತ ನಗದು ಹರಿವು ಪ್ರಮಾಣ ಅಧಿಕವಾಗಿಯೇ ಇದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಅವರು, 2016ರಲ್ಲಿ 18 ಲಕ್ಷ ಕೋಟಿಯಷ್ಟಿದ್ದ ನಗದು ಹರಿವಿನ ಪ್ರಮಾಣ ಪ್ರಸ್ತುತ 31 ಲಕ್ಷ ಕೋಟಿಯಷ್ಟಾಗಿದೆ. ನಕಲಿ ನೋಟುಗಳಿಂದಾಗಿ ಹಲವು ತೊಂದರೆಗಳಾಗಿವೆ. ನೋಟು ಅಮಾನ್ಯೀಕರಣ ಉದ್ದೇಶ ಈಡೇರದಿರುವುದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೆ ಕಪ್ಪು ಹಣವನ್ನು ಮತ್ತೆ ತರುವ ಉದ್ದೇಶ ಮತ್ತು ಭಯೋತ್ಪಾದನೆ ತಡೆಯುವ ಉದ್ದೇಶಕ್ಕಾಗಿ ನೋಟು ಅಮಾನ್ಯೀಕರಣ ವ್ಯವಸ್ಥೆ ಜಾರಿಗೊಳಿಸಲಾಯಿತಾದರೂ, ಆ ಉದ್ದೇಶ ಉದ್ದೇಶವಾಗಿಯೇ ಉಳಿದಿದೆ. ಆದರೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ನಿಶಿಕಾಂತ್ ದುಬೆ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹೆಚ್ಚಿತ್ತು. ಆದರೆ ಅಂತಹವುಗಳಿಗೆ ಹೋಗುತ್ತಿದ್ದ ಹಣವನ್ನು ತಡೆಯಲು ಆರ್ಬಿಐ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.
ಕೆಳಹಂತದ ಕೋರ್ಟ್ಗಳಲ್ಲಿ ಐಎಎಸ್ ಮತ್ತು ಐಪಿಎಸ್ ಮಾದರಿಯಲ್ಲಿ ನ್ಯಾಯಾಧೀಶರ ಮತ್ತು ನ್ಯಾಯಾಂಗ ಅಧಿಕಾರಿಗಳನ್ನು ಆಯ್ಕೆ ಮಾಡುವ ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್) ಜಾರಿ ಕೇಂದ್ರದ ಚಿಂತನೆಯಾಗಿದ್ದರೂ, ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಆ ಪ್ರಸ್ತಾವ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜೀಜು ತಿಳಿಸಿದರು.