ಶಿಮ್ಲಾ, ಡಿ 10 (DaijiworldNews/DB): ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಮುಂದಿನ ಮುಖ್ಯಮಂತ್ರಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಗೆಲುವಿಗೆ ಪ್ರಿಯಾಂಕಾ ಕೂಡಾ ಕಾರಣಕರ್ತರು. ಹಲವು ರ್ಯಾಲಿಗಳನ್ನು ಪ್ರಿಯಾಂಕಾ ಮುನ್ನಡೆಸಿದ್ದರು. ಚುನಾವಣಾ ಕಾರ್ಯತಂತ್ರ ರೂಪಿಸುವುದರಲ್ಲಿಯೂ ತೊಡಗಿಸಿಕೊಂಡಿದ್ದರು. ಫಲಿತಾಂಶದ ಬಳಿಕ ಅವರ ನಾಯಕತ್ವದ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗಿತ್ತು.
ಪ್ರಿಯಾಂಕಾ ಪ್ರಚಾರದ ಜವಾಬ್ದಾರಿ ವಹಿಸಿಕೊಂಡ ಬಳಿಕದ ಮೊದಲ ಗೆಲುವು ಇದಾಗಿದೆ. ಹೀಗಾಗಿ ಅವರೇ ಸಿಎಂ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಸದ್ಯ ಸಿಎಂ ಸ್ಥಾನಕ್ಕಾಗಿ ಹಲವರಿಂದ ಬಿರುಸಿನ ಪೈಪೋಟಿ ನಡೆಯುತ್ತಿದೆ. 40 ಕಾಂಗ್ರೆಸ್ ಶಾಸಕರು ಪಕ್ಷದ ಸಾಂಪ್ರದಾಯಕಿ ನಿರ್ಣಯವನ್ನು ಶುಕ್ರವಾರ ಸಂಜೆ ಅಂಗೀಕಾರ ಮಾಡಿದ್ದಾರೆ. ಇನ್ನು ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದ್ದು, ಭಾನುವಾರದೊಳಗೆ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.