ಅಸ್ಸಾಂ, ಡಿ 09 (DaijiworldNews/DB): ಮುಸ್ಲಿಂ ಹೆಣ್ಮಕ್ಕಳಿಗೆ ಹಿಜಾಬ್ ಧರಿಸಿ ಎನ್ನುವವರು ಹುಡುಗರಿಗೂ ಅದನ್ನು ಧರಿಸಲು ಏಕೆ ಹೇಳುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಪ್ರಶ್ನಿಸಿದ್ದಾರೆ.
ಮಹಿಳೆಯರ ವಿರುದ್ದ ಹೇಳಿಕೆ ನೀಡಿದ್ದ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ಹರಿಹಾಯ್ದಿರುವ ಅವರು, ಸ್ವತಂತ್ರ ಭಾರತದಲ್ಲಿ ಯಾವುದೇ ಪುರುಷನಿಗೂ ವಿಚ್ಚೇದನದ ಹೊರತಾಗಿ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಹಕ್ಕಿಲ್ಲ. ಮುಸ್ಲಿಂ ಪುರುಷರು ಮೂರ್ನಾಲ್ಕು ವಿವಾಹವಾಗುವ ವ್ಯವಸ್ಥೆಯನ್ನು ಬದಲಿಸಬೇಕು. ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಲು ಈ ಬದಲಾವಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ಒತ್ತಾಯಿಸುವ ಅವರು ಆ ಸಮುದಾಯದ ಹುಡುಗರಿಗೂ ಹಿಜಾಬ್ ಧಾರಣೆಗೆ ಯಾಕೆ ಹೇಳುವುದಿಲ್ಲ? ಶಾಲೆಗಳಲ್ಲಿ ಓದಲು ಹುಡುಗಿಯರಿಗೆ ಅವಕಾಶವನ್ನೂ ನೀಡುವುದಿಲ್ಲ. ಎಲ್ಲರೊಂದಿಗೆ ಎಲ್ಲರ ಅಭಿವೃದ್ದಿ ನಮ್ಮ ನೀತಿಯೇ ಹೊರತು, ಮಹಿಳೆಯರಿಗೊಂದು, ಪುರುಷರಿಗೊಂದು ನ್ಯಾಯ ನೀಡುವುದಲ್ಲ ಎಂದರು.