ಹಾಸನ, ಡಿ 9 (DaijiworldNews/HR): ಒಬ್ಬ ಜನಪ್ರತಿನಿಧಿಗೆ ಗೌರವ ಕೊಡಲಿಲ್ಲ ಎಂದ ಮೇಲೆ ಎಚ್.ಎಂ.ವಿಶ್ವನಾಥ್ ಯಾವುದೇ ಸಭೆಗೆ ಬರಲು ಲಾಯಕ್ ಇಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಎಚ್.ಕೆ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಜ್ವಲ್, ನಾನು ಒಳ್ಳೆಯತನದಲ್ಲಿ ಅವರಿಗೆ ಒಂದು ಮಾತು ಹೇಳುತ್ತೇನೆ. ಕಾಡಾನೆಗಳ ಸಮಸ್ಯೆ ಇರುವುದು ನಿಜ, ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಹೋರಾಟದಲ್ಲಿ ಪಕ್ಷ ಮತ್ತು ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಾಡಾನೆಗಳ ಸಮಸ್ಯೆ ಬಗ್ಗೆ ಪಕ್ಷಾತೀತವಾಗಿ ಹೋರಾಟ ಮಾಡೋಣ ಎಂದಿದ್ದೇನೆ. ಇದು ದೊಡ್ಡ ಗುಣ. ಚಿಕ್ಕವರಿಂದ ಏನನ್ನು ಕಲಿಯುವುದಿಲ್ಲ, ದೊಡ್ಡವರಿಂದ ಬಹಳಷ್ಟು ಕಲಿತಿದ್ದೇವೆ. ನಾವು ಎಲ್ಲಾ ಪಕ್ಷದವರಿಗೂ ಗೌರವ ಕೊಡುತ್ತೇವೆ. ಎಚ್.ಎಂ.ವಿಶ್ವನಾಥ್ ನಮ್ಮ ಜೊತೆ ಹೋರಾಟಕ್ಕೆ ಬಂದರೆ ಖುಷಿ ಎಂದು ಹೇಳಿದ್ದಾರೆ.