ಗಂಗಾವತಿ, ಡಿ 9 (DaijiworldNews/HR): ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಗಂಗಾವತಿ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಗೆ ಭೇಟಿ ನೀಡಿ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದಿದ್ದು, ರಾಜ್ಯಪಾಲರು ಆಗಮಿಸುವ ಅರ್ಧ ಗಂಟೆಗೂ ಮುಂಚೆ ಪೂಜೆ ನೆರವೇರಿಸುವ ಕುರಿತು ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಮತ್ತು ಅಧಿಕಾರಿಗಳ ಮಧ್ಯೆ ಕೆಲಹೊತ್ತು ವಾಗ್ದಾದ ನಡೆದು ಬಾಬಾ ಅವರನ್ನು ಪೊಲೀಸರು ಎತ್ತಿಕೊಂಡು ಹೋಗಿ ಹೊರಗೆ ಕಳಿಸಿದ ಘಟನೆ ನಡೆದಿದೆ.
ರಾಜ್ಯಪಾಲ ಗೆಹ್ಲೋಟ್ ಅವರು ಅಂಜನಾದ್ರಿಯ ಬೆಟ್ಟದ ಕೆಳಗಿನ ಬಲಭಾಗದಲ್ಲಿರುವ ಪಾದಗಟ್ಟೆ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿತ್ತು.
ಇನ್ನು ದೇಗುಲದ ಕಮಿಟಿ ಕೆಳಗೆ ಪೂಜೆ ನೆರವೇರಿಸಲು ಅನ್ಯ ಪುರೋಹಿತರನ್ನು ನಿಯೋಜನೆ ಮಾಡಿದ್ದನ್ನು ವಿರೋಧಿಸಿ ತಾವು ಅಂಜನಾದ್ರಿಯ ಅರ್ಚಕರಾಗಿ ಎರಡು ದಶಕಗಳಿಂದ ಪೂಜೆ ಮಾಡುತ್ತಿದ್ದು, ಧಾರವಾಡ ಹೈಕೋರ್ಟ್ ಪೂಜೆ ಮಾಡಲು ಅವಕಾಶ ಕಲ್ಪಿಸುವ ಅವಕಾಶ ನೀಡಿದೆ. ಅಧಿಕಾರಿಗಳು ಹೈಕೋರ್ಟ್ ಆದೇಶ ಉಲ್ಲಂಘಿಸಿ ಅನ್ಯರನ್ನು ರಾಜ್ಯಪಾಲರು ಆಗಮಿಸುವ ಸಂದರ್ಭ ಪೂಜೆ ಮಾಡಲು ನಿಯೋಜನೆ ಮಾಡಲಾಗಿದೆ. ಈ ಕಾರಣ ಅರ್ಚಕ ತಾವೇ ಪೂಜೆ ಮಾಡುವುದಾಗಿ ಹಠ ಹಿಡಿದ ಸಂದರ್ಭದಲ್ಲಿ ಎಸಿ ಹಾಗೂ ದೇಗುಲ ಕಮಿಟಿ ಆಡಳಿತಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಸಿಪಿಐ ಮಂಜುನಾಥ ಮಧ್ಯೆ ಪ್ರವೇಶ ಮಾಡಿದಾಗ ಅರ್ಚಕ ಬಾಬಾ ಹಾಗೂ ಅಧಿಕಾರಿಗಳ ಮಧ್ಯೆ ವಾಗ್ದಾದ ನಡೆದಿದೆ ಎಂದು ವರದಿಯಾಗಿದೆ.