ನವದೆಹಲಿ, ಡಿ 09 (DaijiworldNews/DB): ಇಂಗ್ಲಿಷ್ ಪತ್ರಿಕೆಗಳು ಪ್ರಧಾನಿ ಕಾರ್ಯಾಲಯದ ಕರೆಗಳಿಗೆ ನಡುಗುತ್ತವೆ ಎಂದು ಬಿಜೆಪಿ ನಾಯಕ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರ ನೀತಿಗಳು ಸರಿಯಾಗಿರದಿದ್ದರೂ ಅವುಗಳನ್ನು ವಿರೋಧಿಸಿ ವರದಿ ಬರೆಯುವ ಧೈರ್ಯವನ್ನು ಈ ಪತ್ರಿಕೆಗಳು ತೋರುವುದಿಲ್ಲ. ಇಂಗ್ಲಿಷ್ ಪತ್ರಿಕೆಗಳ ಕಚೇರಿಗಳಿಗೆ ಪ್ರಧಾನಿ ಕಾರ್ಯಾಲಯದಿಂದ ಹೋಗುವ ಕರೆಗಳಿಂದಲೇ ಅವರಿಗೆ ನಡುಕ ಉಂಟಾಗುತ್ತದೆ ಎಂದಿದ್ದಾರೆ.
ನನಗೆ ವಿವಿಧ ಭಾಷೆಗಳ ಪತ್ರಿಕೆಗಳು ಉತ್ತಮ ಕವರೇಜ್ ನೀಡುತ್ತಿವೆ. ನಾನು ಈ ಬಗ್ಗೆ ಈವರೆಗೆ ತಲೆಕೆಡಿಸಿಕೊಂಡದ್ದೇ ಇಲ್ಲ. ಆದರೆ ಇನ್ನು ಇಂಗ್ಲಿಷ್ ಮಾಧ್ಯಮಗಳು ಮತ್ತು ವಿದೇಶಿ ಮಾಧ್ಯಮಗಳಿಗೆ ಬೈಟ್ ನೀಡಲು ನಾನು ಆರಂಭಿಸುತ್ತೇನೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಸ್ವಪಕ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಆಗಾಗ ಟ್ವೀಟ್ ಮುಖಾಂತರ ತರಾಟೆಗೆ ತೆಗೆದುಕೊಳ್ಳುವ ಸುಬ್ರಮಣಿಯನ್ ಸ್ವಾಮಿ ಅವರು, ಪ್ರಧಾನಿ ಮತ್ತು ಗೃಹ ಸಚಿವರ ವಿವಿಧ ನಿಲುವು, ಯೋಜನೆ, ಹೇಳಿಕೆಗಳನ್ನು ವಿರೋಧಿಸುತ್ತಲೇ ಸುದ್ದಿಯಾಗುತ್ತಿದ್ದಾರೆ.