ಮುಂಬೈ, ಡಿ 09 (DaijiworldNews/DB): ಬಿಜೆಪಿಯು ಕರ್ನಾಟಕ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ, ತಮ್ಮ ಪಕ್ಷದ ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರುವ ಅವರು, ಮಹಾರಾಷ್ಟ್ರಕ್ಕೆ ನೀಡಬೇಕಾದ ಅಭಿವೃದ್ದಿ ಯೋಜನೆಗಳನ್ನು ಕಸಿದು ಗುಜರಾತ್ಗೆ ನೀಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಸಿಎಂ ಮತ್ತು ಡಿಸಿಎಂ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಇನ್ನು ಕರ್ನಾಟಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದ ಗ್ರಾಮಗಳನ್ನು ಆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗುಜರಾತ್ನ ಸ್ಥಿತಿಗತಿ, ಮೊರ್ಬಿ ಸೇತುವೆ ದುರಂತದ ಬಳಿಕವೂ ಅಲ್ಲಿ ಬಿಜೆಪಿ ಗೆದ್ದಿರುವುದು ಅಚ್ಚರಿಯ ವಿಷಯವಲ್ಲ. ಜಾಗತಿಕ ಸಮಾವೇಶಗಳು, ಜಾಗತಿಕ ನಾಯಕರ ಸಬರಮತಿ ಆಶ್ರಮ ಭೇಟಿ, ಮಹಾರಾಷ್ಟ್ರದ ಅಭಿವೃದ್ದಿ ಯೋಜನೆಯನ್ನು ಗುಜರಾತ್ಗೆ ವರ್ಗಾಯಿಸಿರುವುದು, ಸರ್ದಾರ್ ಪಟೇಲರ ಮೂರ್ತಿ, ಮೋದಿಯವರ ಗುಜರಾತ್ ಅಸ್ಮಿತೆ ಇವೆಲ್ಲ ಕಾರಣದಿಂದಾಗಿ ಗುಜರಾತ್ನಲ್ಲಿ ಬಿಜೆಪಿ ಗೆದ್ದಿದೆ ಎಂದವರು ಹೇಳಿದ್ದಾರೆ.