ಶಿಮ್ಲಾ, ಡಿ 09 (DaijiworldNews/DB): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ಬೀಗಿರುವ ಕಾಂಗ್ರೆಸ್ ಇದೀಗ ಅಧಿಕಾರದ ಚುಕ್ಕಾಣಿ ಹಿಡಿಯಲು ತಯಾರಿ ನಡೆಸುತ್ತಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಆಯ್ಕೆಗಾಗಿ ಪಕ್ಷ ಇಂದು ಶಾಸಕರ ಸಭೆ ಕರೆದಿದೆ.
ಬಿಜೆಪಿ ಹಿಡಿತದಲ್ಲಿದ್ದ ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಫಲಿತಾಂಶಕ್ಕೂ ಮುನ್ನ ಶಾಸಕರನ್ನು ಚಂಡೀಗಢಕ್ಕೆ ಕರೆದಿದ್ದ ನಾಯಕರು, ಸ್ಪಷ್ಟ ಬಹುಮತ ಪಡೆದ ನಂತರ ಶಿಮ್ಲಾದಲ್ಲಿಯೇ ಸಭೆ ಕರೆದಿದ್ದು, ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಿದೆ. ಅಲ್ಲದೆ ಶಾಸಕಾಂಗ ಪಕ್ಷದ ನಾಯಕನನ್ನು ಕೂಡಾ ಇದೇ ಸಭೆಯಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಉಸ್ತುವಾರಿ ರಾಜೀವ್ ಶುಕ್ಲಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಹಿಮಾಚಲದಲ್ಲಿ ಕಾಂಗ್ರೆಸ್ ಗೆಲ್ಲಲು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹಿರಿಯ ನಾಯಕ ಭೂಪಿಂದರ್ ಹೂಡಾ ಅವರ ಸಹಕಾರ ತುಂಬಾ ಇದೆ. ಇಂದು ಎಲ್ಲಾ ನಾಯಕರು ಸಭೆ ಸೇರಲಿದ್ದು, ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಸುಖ್ವಿಂದರ್ ಸಿಂಗ್ ಸುಖು, ಮುಕೇಶ್ ಅಗ್ನಿಹೋತ್ರಿ ಮತ್ತು ಪ್ರತಿಭಾ ಸಿಂಗ್ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದಾರೆ.ಆಶಾ ಕುಮಾರಿ ಮತ್ತು ಕೌಲ್ ಸಿಂಗ್ ಠಾಕೂರ್ ಅವರೂ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ ಎಂದೂ ಹೇಳಲಾಗಿದೆ.
68 ಸದಸ್ಯಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ 40 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದೆ. 25 ಸ್ಥಾನ ಬಿಜೆಪಿ ಗಳಿಸಿದ್ದು, ಸೋಲೊಪ್ಪಿಕೊಂಡು ಸಿಎಂ ಜೈರಾಮ್ ಠಾಕೂರ್ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.