ಅಹಮದಾಬಾದ್, ಡಿ 9 (DaijiworldNews/HR): ಗುಜರಾತ್ನ ಮೊರ್ಬಿ ಸೇತುವೆ ಪ್ರಕರಣದ ಕುರಿತಾಗಿ ಸುಳ್ಳು ಟ್ವೀಟ್ ಮಾಡಿದ ಆರೋಪದ ಮೇಲೆ ಟಿಎಂಸಿಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಬಂಧಿಸಲಾಗಿದ್ದು, ಅವರಿಗೆ ಗುರುವಾರ ಜಾಮೀನು ನೀಡಿದ ಕೆಲವೇ ಗಂಟೆಗಳ ಬಳಿಕ ಗುಜರಾತ್ ಪೊಲೀಸರು ಮತ್ತೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಾದಿರುವ ಟಿಎಂಸಿ ಹಿರಿಯ ನಾಯಕ ಡೆರೆಕ್ ಓಬ್ರಿಯಾನ್, ಗುರುವಾರ ಜಾಮೀನು ಪಡೆದ ನಂತರ ಕೆಲವೇ ಗಂಟೆಗಳಲ್ಲಿ ಸಾಕೇತ್ ಗೋಖಲೆ ಅವರಿಗೆ ಗುಜರಾತ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 8 ರಂದು ರಾತ್ರಿ 8.45 ಕ್ಕೆ ಮತ್ತೆ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಅವರು ಅಹಮದಾಬಾದ್ನ ಸೈಬರ್ ಪಿಎಸ್ನಿಂದ ಹೊರಡುತ್ತಿದ್ದಾಗ, ಯಾವುದೇ ಸೂಚನೆ/ವಾರೆಂಟ್ ಇಲ್ಲದೆ ಪೊಲೀಸ್ ತಂಡ ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದು ಖಂಡನೀಯ ಎಂದು ಹೇಳಿದ್ದಾರೆ.
ಇನ್ನು ಅಕ್ಟೋಬರ್ನಲ್ಲಿ ತೂಗುಸೇತುವೆ ಕುಸಿದ ನಂತರ ಮೊರ್ಬಿ ಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಕುರಿತು ಸುಳ್ಳು ಸುದ್ದಿ ವರದಿಯನ್ನು ಅನುಮೋದಿಸಿ ಟ್ವೀಟ್ ಮಾಡಿದ್ದಕ್ಕಾಗಿ ಟಿಎಂಸಿ ನಾಯಕ ಸಾಕೇತ್ ಗೋಖಲೆ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಅವರನ್ನು ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.