ಮುಂಬೈ, ಡಿ 08 (DaijiworldNews/DB): ನಿರೀಕ್ಷೆಯಂತೆಯೇ ಗುಜರಾತ್ ಚುನಾವಣೆಯ ಫಲಿತಾಂಶ ಬಂದಿದೆ. ಆದರೆ ಈ ಫಲಿತಾಂಶ ರಾಷ್ಟ್ರದ ಮನಸ್ಥಿತಿ ಬಿಂಬಿಸುವುದಿಲ್ಲ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಎನ್ಸಿಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಇಡೀ ದೇಶದ ಆಡಳಿತ ಯಂತ್ರವನ್ನು ಒಂದು ರಾಜ್ಯದ ಹಿತದೃಷ್ಟಿಯಿಂದ ಬಳಕೆ ಮಾಡಿದ್ದಲ್ಲದೆ, ಯೋಜನೆಗಳನ್ನೆಲ್ಲ ಆ ರಾಜ್ಯಕ್ಕೇ ವರ್ಗಾಯಿಸಿ ಅಭಿವೃದ್ದಿಪಡಿಸಲಾಗುತ್ತಿದೆ. ಈ ಕಾರಣದಿಂದಲೇ ಗುಜರಾತ್ನಲ್ಲಿ ಜನಾದೇಶ ನಿರೀಕ್ಷೆಯಂತೆಯೇ ಬಂದಿದೆ ಎಂದು ಕುಟುಕಿದರು.
ಗುಜರಾತ್ ಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನುವುದಕ್ಕೆ ಬರುವುದಿಲ್ಲ. ಏಕೆಂದರೆ ಈ ಫಲಿತಾಂಶ ದೇಶದ ಮನಸ್ಥಿತಿಯನ್ನು ಬಿಂಬಿಸುವುದಿಲ್ಲ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಂದೂವರೆ ದಶಕದ ಬಿಜೆಪಿ ಆಡಳಿತವನ್ನು ಸೋಲಿಸಿರುವುದು ಮತ್ತು ಬಿಜೆಪಿ ಆಡಳಿತವಿದ್ದ ಹಿಮಾಚಲಪ್ರದೇಶದಲ್ಲಿಯೂ ಆ ಪಕ್ಷವನ್ನು ಸೋಲಿಸಿರುವುದು ಇದಕ್ಕೆ ನಿದರ್ಶನ ಎಂದವರು ಪ್ರತಿಪಾದಿಸಿದರು.