ಬೆಂಗಳೂರು, ಡಿ 08 (DaijiworldNews/DB): ಯಾವುದೇ ರಾಜ್ಯದಲ್ಲಿ ಸುಶಾಸನ ತಂದರೆ ಜನರು ಬೆಂಬಲ ನೀಡುತ್ತಾರೆ ಎಂಬುದು ಗುಜರಾತ್ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಸರ್ಕಾರಗಳು ಜನಪರ ಕೆಲಸ ಮಾಡಿದರೆ ಜನ ಆಡಳಿತದ ಪರವಾಗಿ ನಿಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಲಲಿತ್ ಅಶೋಕ್ ಹೊಟೇಲ್ ಬಳಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಒಂದು ರಾಜ್ಯದಲ್ಲಿ ಏಳು ಬಾರಿ ಗೆಲ್ಲುವುದೆಂದರೆ ಸುಲಭದ ಮಾತಲ್ಲ. ಕಳೆದೆಲ್ಲಾ ಚುನಾವಣೆಗಳಿಗಿಂತಲೂ ಅತಿ ಹೆಚ್ಚು ಸ್ಥಾನಗಳನ್ನು ಈ ಚುನಾವಣೆಯಲ್ಲಿ ಗುಜರಾತ್ನಲ್ಲಿ ಬಿಜೆಪಿ ಪಡೆದುಕೊಳ್ಳುತ್ತಿದೆ. ಇದು ಆ ರಾಜ್ಯದಲ್ಲಿ ತಂದ ಸುಶಾನದ ಫಲ. ಅಲ್ಲಿನ ಆಡಳಿತದ ಕೆಲಸಕ್ಕೆ ಸಿಕ್ಕ ಫಲ. ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಸಿಕ್ಕ ಫಲ ಎಂದರು.
ದೇಶ ಮುನ್ನಡೆಸುವ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ಅವರ ಸಮರ್ಥ ನಾಯಕತ್ವವನ್ನು ಜನರು ಒಪ್ಪಿಕೊಂಡಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ನಲ್ಲಿ ಬಿಜೆಪಿಯ ಗೆಲುವಿನ ಪರಿಣಾಮ ಕರ್ನಾಟಕದ ಚುನಾವಣೆ ಮೇಲೆ ಆಗಲಿದೆ. ರಾಜ್ಯದಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಈ ಚುನಾವಣಾ ಫಲಿತಾಂಶ ನೈತಿಕ ಬೆಂಬಲ ನೀಡಲಿದೆ ಎಂದು ತಿಳಿಸಿದರು.