ಅಹಮಾದಾಬಾದ್, ಡಿ 08 (DaijiworldNews/DB): ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿ ಗುಜರಾತ್ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಕುತ್ತಿಗೆಯನ್ನು ಶಾಲಿನಿಂದ ಬಿಗಿದು ಹೈಡ್ರಾಮ ಸೃಷ್ಟಿಸಿದ ಪ್ರಸಂಗ ನಡೆದಿದೆ. ಇದರಿಂದಾಗಿ ಮತ ಎಣಿಕೆ ಕೇಂದ್ರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಗಾಂಧಿಧಾಮ್ ಅಭ್ಯರ್ಥಿ ವೆಲ್ಜಿಭಾಯ್ ಸೊಲಂಕಿ ಅವರೇ ಹೈಡ್ರಾಮ ಸೃಷ್ಟಿಸಿದ ಕಾಂಗ್ರೆಸ್ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಮಾಲ್ತಿ ಕಿಶೋರ್ ಮಹೇಶ್ವರಿ ಅವರು 12 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು.
ಮತ ಎಣಿಕೆ ನಡೆಯುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರಕ್ಕೆ ಬಂದ ಸೊಲಂಕಿ ಕೆಲವು ಇವಿಎಂಗಳನ್ನು ಸರಿಯಾಗಿ ಸೀಲ್ ಮಾಡಿರಲಿಲ್ಲ ಎಂದು ಆರೋಪಿಸಿದರು. ಬಳಿಕ ಇವಿಎಂ ತಿರುಚಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಸ್ಥಳದಲ್ಲೇ ಧರಣಿ ಕುಳಿತರು. ಇದರಿಂದಾಗಿ ಮತ ಎಣಿಕೆ ಕೇಂದ್ರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.