ಮುಂಬೈ, ಡಿ 08 (DaijiworldNews/DB): ಗುಜರಾತ್ ಚುನಾವಣಾ ಫಲಿತಾಂಶ ನಿರೀಕ್ಷಿತ. ಆದರೆ ಬಿಜೆಪಿ ಮತ್ತು ಎಎಪಿ ನಡುವೆ ಒಳ ಒಪ್ಪಂದವೇರ್ಪಟ್ಟಿರುವ ಅನುಮಾನ ಈ ಫಲಿತಾಂಶದಿಂದ ವ್ಯಕ್ತವಾಗುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಗುಜರಾತ್ ಚುನಾವಣಾ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ನಲ್ಲಿ ಬಂದಿರುವ ಫಲಿತಾಂಶದಲ್ಲಿ ಅಚ್ಚರಿಪಡುವಂತದ್ದೇನೂ ಇಲ್ಲ. ಅದು ನಿರೀಕ್ಷಿತ ಫಲಿತಾಂಶ. ಆದರೆ ಬಿಜೆಪಿ ಮತ್ತು ಎಎಪಿ ನಡುವೆ ದೆಹಲಿ ನೀವಿಟ್ಟುಕೊಳ್ಳಿ, ಗುಜರಾತ್ ನಮಗೆ ಬಿಟ್ಟು ಕೊಡಿ ಎಂಬ ಒಳ ಒಪ್ಪಂದ ಏರ್ಪಟ್ಟಿರುವ ಅನುಮಾನ ಜನರಲ್ಲಿ ಆರಂಭವಾಗಿದೆ ಎಂದರು.
ಕಳೆದ ಒಂದೂವರೆ ದಶಕಗಳಿಂದ ದೆಹಲಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಆಮ್ ಆದ್ಮಿ ಪಕ್ಷ ಈ ಬಾರಿ ಸೋಲಿಸಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಆದರೆ ಬಿಜೆಪಿಯಂತಹ ಪಕ್ಷದಿಂದ ದೆಹಲಿಯ ಅಧಿಕಾರವನ್ನು ಕಿತ್ತುಕೊಳ್ಳುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವನ್ನು ಶ್ಲಾಘಿಸಬೇಕಿದೆ ಎಂದವರು ತಿಳಿಸಿದರು.
ನಿರೀಕ್ಷೆಯಂತೆಯೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೋರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಭಿನ್ನಾಭಿಪ್ರಾಯ, ಅಹಂಕಾರ ಬದಿಗಿಟ್ಟು ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿ ಹೋರಾಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬದಲಾವಣೆ ನಿಶ್ಚಿತ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.