ನವದೆಹಲಿ, ಡಿ 08 (DaijiworldNews/DB): ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡುವುದಕ್ಕೂ ಮುನ್ನ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಮೇಲ್ಮನೆಗೆ ಸ್ವಾಗತಿಸಿದರು.
ನಮ್ಮ ಉಪ ರಾಷ್ಟ್ರಪತಿಯವರು ರೈತನ ಮಗ. ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಅವರ ಪ್ರಸ್ತುತ ದೇಶದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಹುಟ್ಟೂರು ಝುಂಝುನು ಕೂಡಾ ದೇಶ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಅಲ್ಲಿನ ಹಲವು ಕುಟುಂಬಗಳು ದೇಶಕ್ಕಾಗಿ ಕೊಡುಗೆ ನೀಡಿವೆ ಎಂದು ಪ್ರಧಾನಿ ಮೋದಿ ಸ್ಮರಿಸಿದರು. ಅಲ್ಲದೆ ಸಶಸ್ತ್ರ ಪಡೆಗಳ ಧ್ವಜ ದಿನ ಹಿನ್ನೆಲೆಯಲ್ಲಿ ಬುಧವಾರ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದರು.
ಸ್ವಾತಂತ್ರ್ಯದ ಅಮೃತ ಕಾಲದಲ್ಲಿರುವ ಭಾರತಕ್ಕೆ ಜಿ-20 ಶೃಂಗಸಭೆಯ ಅಧ್ಯಕ್ಷತೆಯ ಹಿರಿಮೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ನವಭಾರತದ ಅಭಿವೃದ್ದಿಯೊಂದಿಗೆ ವಿಶ್ವದ ದಿಕ್ಕನ್ನೂ ನಿರ್ಧರಿಸುವಲ್ಲಿ ಭಾರತ ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ವಿಚಾರದಲ್ಲಿ ನಮ್ಮ ಸಂಸತ್ತು ಮತ್ತು ಸಂಸದೀಯ ವ್ಯವಸ್ಥೆ ನಿರ್ಣಾಯಕ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದವರು ತಿಳಿಸಿದರು.