ಬೆಂಗಳೂರು, ಡಿ 07( DaijiworldNews/MS): ‘ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ವನ್ನು ಕಾಂಗ್ರೆಸ್ ಪಕ್ಷ ಜ.8ರಂದು ಚಿತ್ರದುರ್ಗದಲ್ಲಿ ನಡೆಸಲು ತೀರ್ಮಾನಿಸಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಪ್ರಕಟಿಸಿದರು.ಕರ್ನಾಟಕದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ, ಬಡತನ ರೇಖೆಯಿಂದ ಹೊರಗೆ ಮುಖ್ಯವಾಹಿನಿಗೆ ತರಲು ಕಾನೂನಾತ್ಮಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇಂದು ಬೇರೆ ಬೇರೆ ಪಕ್ಷಗಳು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿವೆ. ಯಾವ ಪಕ್ಷಗಳು ಅವರ ಯೋಗಕ್ಷೇಮಕ್ಕೆ ಪ್ರಯತ್ನಿಸಲಿಲ್ಲ. ಪಕ್ಷದ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಪೋಟೋಗಳನ್ನು ಹಾಕಿಕೊಳ್ಳದವರು ಇಂದು ದಲಿತರ ಮನೆಗಳಲ್ಲಿ ಮಲಗಲು, ಬೇರೆ ಹೊಟೇಲ್ ನಿಂದ ಊಟ ತರಿಸಿ ತಿಂದು ಬರುತ್ತಿದ್ದಾರೆ.
ಈ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳು ನಮ್ಮ ಜನರಿಗೆ ನಿಮ್ಮ ಜತೆ ಇದ್ದೇವೆ. ನಿಮ್ಮ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಮರುಭರವಸೆ ನೀಡಲು ಸಮಾವೇಶ ಮಾಡಲು ನಾವೆಲ್ಲ ಪೂರ್ವಭಾವಿ ಸಭೆ ಮಾಡಿ ನಿರ್ಧರಿಸಿದ್ದೇವೆ.
ಪೂರ್ವಭಾವಿ ಸಭೆಯಲ್ಲಿ ಎಲ್ಲ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ನಾಯಕರು ಸೇರಿ ಈ ಸಮಾವೇಶವನ್ನು ಮಾಡಿ ಎಲ್ಲ ಸಮುದಾಯಗಳು ಒಟ್ಟಾಗಿ ಸೇರಬೇಕು ನಿರ್ಧರಿಸಿದ್ದೇವೆ. ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪರಿಶಿಷ್ಟ ಪಂಗಡದಲ್ಲಿ 52 ಸಮುದಾಯಗಳಿದ್ದು, ಈ ಎಲ್ಲ ಸಮುದಾಯಗಳನ್ನು ಒಂದು ವೇದಿಕೆ ಮೇಲೆ ತರಬೇಕು. ಎಲ್ಲರಿಗೂ ಸಮಸ್ಯೆ ಒಂದೇ ಆಗಿದ್ದು, ನಮ್ಮಲ್ಲಿ ವ್ಯತ್ಯಾಸ ಇರಬಾರದು. ನಮ್ಮನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಎರಡೂ ಸಮುದಾಯ ಸೇರಿ 24.1% ಜನರಿದ್ದು, ಸುಮಾರು 1.5 ಕೋಟಿ ಜನ ಇದ್ದಾರೆ.
ಈ ಸಮಾವೇಶವನ್ನು ಚಿತ್ರದುರ್ಗದಲ್ಲಿ ಜ.8ರಂದು ಭಾನುವಾರ ಸಮಾವೇಶ ಮಾಡಲು ತೀರ್ಮಾನಿಸಲಾಗುವುದು. ಬೆಂಗಳೂರಿನಲ್ಲಿ ಮಾಡಿದರೆ ಉತ್ತರ ಕರ್ನಾಟಕದ ಜನರಿಗೆ ದೂರವಾಗುತ್ತದೆ. ಹೀಗಾಗಿ ಎಲ್ಲರಿಗೂ ಅನುಕೂಲವಾಗುವಂತೆ ಮಧ್ಯ ಕರ್ನಾಟಕ ಭಾಗದಲ್ಲಿರುವ ಚಿತ್ರದುರ್ಗದಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಲಿದ್ದು, ಅವರ ಜತೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಲ್ಲಿ ಯಾರಾದರೂ ಒಬ್ಬರು ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಕಾರ್ಯಕ್ರಮದಲ್ಲಿ ಈ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಆ ಮೂಲಕ ಜನಸಮುದಾಯಕ್ಕೆ ಅರಿವು ಮೂಡಿಸಲಾಗುವುದು.