ಮುಂಬೈ, ಡಿ 07 (DaijiworldNews/DB): ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.
ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಬುಧವಾರ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದರೆ ಉತ್ತಮ. ಅಗತ್ಯ ಬಿದ್ದಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ಬೆಳಗಾವಿಗೆ ಹೋಗಲು ಸಿದ್ದ. ಅಲ್ಲದೆ, ಮಹಾರಾಷ್ಟ್ರದ ಜನರು ಬೆಳಗಾವಿಗೆ ಹೋಗಲು ಕೂಡಾ ತಯಾರಿದ್ದಾರೆ ಎಂದರು.
ಮಹಾರಾಷ್ಟ್ರ ತಾಳ್ಮೆ ವಹಿಸಿದೆ. ಆದರೆ ಆ ತಾಳ್ಮೆಗೂ ಒಂದು ಮಿತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಮುಂದಿನ 24 ಗಂಟೆಗಳೊಳಗಾಗಿ ಮಹಾರಾಷ್ಟ್ರದ ವಾಹನಗಳ ಮೇಲಿನ ದಾಳಿ ನಿಲ್ಲಬೇಕು. ಇಲ್ಲದಿದ್ದರೆ ನಮ್ಮ ತಾಳ್ಮೆಯನ್ನು ಬೇರೆ ಸ್ವರೂಪದಲ್ಲಿ ನೋಡಬೇಕಾಗುತ್ತದೆ ಎಂದು ಇದೇ ವೇಳೆ ಅವರು ಎಚ್ಚರಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಮಹಾರಾಷ್ಟ್ರ, ಕರ್ನಾಟಕದಲ್ಲಿಯೂ ಅವರದೇ ಸರ್ಕಾರವಿದೆ. ಹಾಗಿದ್ದಾಗ್ಯೂ ಬೆಳಗಾವಿಯಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.