ನವದೆಹಲಿ,ಡಿ 07( DaijiworldNews/MS): ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ ಕೇಜ್ರಿವಾಲ್ ಎಎಪಿ ಗೆಲುವಿಗಾಗಿ ಜನರಿಗೆ ಧನ್ಯವಾದ ಅರ್ಪಿಸಿ "ನನಗೆ ಕೇಂದ್ರ ಸರ್ಕಾರದ ಸಹಕಾರ ಬೇಕು, ಪ್ರಧಾನಿ ಮೋದಿಯವರ ಆಶೀರ್ವಾದ ಬೇಕು" ಎಂದು ಹೇಳಿದ್ದಾರೆ.
ಪಾಲಿಕೆ ಚುನಾವಣೆ ಗೆಲುವಿನ ಬಳಿಕ ಎಎಪಿ ಪ್ರಧಾನ ಕಛೇರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಅವರು, "ನಾವೆಲ್ಲರೂ ದೆಹಲಿಯ ಸ್ಥಿತಿಯನ್ನು ಸುಧಾರಿಸಬೇಕಾಗಿದೆ ಮತ್ತು ನನಗೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲರ ಸಹಕಾರ ಬೇಕು. ನಮಗೆ ಎಲ್ಲರ ಸಹಕಾರ ಬೇಕು, ವಿಶೇಷವಾಗಿ ಕೇಂದ್ರ ಮತ್ತು ಪ್ರಧಾನಿಯವರ ಸಹಾಯ ಮತ್ತು ಆಶೀರ್ವಾದ ನಮಗೆ ಅಗತ್ಯವಿದೆ" ಎಂದು ಹೇಳಿದ್ದಾರೆ.
2015ರಿಂದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರದಲ್ಲಿ ಇರುವ ಆಮ್ ಆದ್ಮಿ ಪಕ್ಷವು ಇದೇ ಮೊದಲ ಬಾರಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಪಡೆದಿದೆ. ಚುನಾವಣೆಯಲ್ಲಿ ಎಎಪಿ 134 ಸ್ಥಾನಗಳನ್ನು ಗೆದ್ದಿದೆ, ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿದರೆ, ಸ್ವತಂತ್ರ ಅಭ್ಯರ್ಥಿಗಳು 3ರಲ್ಲಿ ಗೆಲುವು ಸಾಧಿಸಿದ್ದಾರೆ.