ನವದೆಹಲಿ, ಡಿ 07 (DaijiworldNews/DB): ಗುಜರಾತ್ ಚುನಾವಣೆಯಲ್ಲಿ ಎಎಪಿ ಪಕ್ಷ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಲಿವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ಗುಜರಾತ್ ಫಲಿತಾಂಶದಲ್ಲಿಯೂ ಸುಳ್ಳಾಗುವುದು ನಿಶ್ಚಿತ. ಎಎಪಿ ಖಂಡಿತಾ ಗುಜರಾತ್ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪ್ರಸ್ತುತ ಟ್ರೆಂಡ್ಗಳೇ ಫಲಿತಾಂಶಗಳಾಗಿ ಬದಲಾಗುತ್ತಿವೆ. ದೆಹಲಿಯಲ್ಲಿ ಕಾಂಗ್ರೆಸ್ನ ಒಂದೂವರೆ ದಶಕದ ಆಡಳಿತವನ್ನು ಅರವಿಂದ ಕೇಜ್ರೀವಾಲ್ ಅಂತ್ಯಗೊಳಿಸಿದ್ದರು. ಇದೀಗ ದೆಹಲಿ ಮಹಾನಗರ ಪಾಲಿಕೆಯ ಒಂದೂವರೆ ದಶಕದ ಬಿಜೆಪಿ ಆಡಳಿತವೂ ಅಂತ್ಯಗೊಂಡಿದೆ. ಗುಜರಾತ್ನಲ್ಲಿಯೂ ಇದೇ ರೀತಿ ಆಗಲಿದೆ ಎಂದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲನುಭವಿಸಲಿದೆ ಎಂಬುದಾಗಿ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿದ್ದವು. ಈ ರಾಜ್ಯಗಳ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.