ಬೆಂಗಳೂರು, ಡಿ 07 (DaijiworldNews/DB): ಸಿಎಂ ಆಗಿ ಮಾಡಿದ ಜನಸೇವೆಗೆ ನನ್ನನ್ನು ಅನ್ನರಾಮಯ್ಯ, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲ ಜನ ಕರೆಯುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಕೆಲಸ ಗುರ್ತಿಸಿ ಸಿದ್ರಾಮುಲ್ಲಾ ಖಾನ್ ಎಂದು ಕರೆದರೆ ಖುಷಿ ಪಡುವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ಬಗ್ಗೆ ಸಿದ್ರಾಮುಲ್ಲಾ ಖಾನ್ ಎಂದು ಬಿಜೆಪಿ ಮಾಡಿರುವ ಟೀಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರಿಗೆ ಮುಸ್ಲಿಂ ಹೆಸರು ಸೇರಿಸಿರುವ ಬಗ್ಗೆ ನನಗೆ ಬೇಸರವಿಲ್ಲ. ಮುಸ್ಲಿಂ ಕುಟುಂಬದಲ್ಲಿ ಜನಿಸಿ ಗೋವಿಂದ ಭಟ್ಟರ ಶಿಷ್ಯನಾಗಿ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಿರುವ ಸಂತ ಶಿಶುನಾಳ ಷರೀಪರ ಪರಂಪರೆ ನಮ್ಮದು. ಅದೇ ರೀತಿ ಅದೇ ಸಮುದಾಯದಲ್ಲಿ ಹುಟ್ಟಿ ಸಂತ ರಮಾನಂದರ ಶಿಷ್ಯತ್ವ ಒಪ್ಪಿಕೊಂಡ ಸೂಫಿ ಕವಿ ಕಬೀರ ಅವರ ಪರಂಪರೆಯಲ್ಲಿಯೂ ನಾವಿದ್ದೇವೆ. ಹೀಗಾಗಿ ನನ್ನ ಹೆಸರನ್ನು ಮುಸ್ಲಿಂ ಹೆಸರಿನೊಂದಿಗೆ ಜೋಡಿಸುವ ಮೂಲಕ ಅವರು ನನ್ನ ಜಾತ್ಯಾತೀತ ನಂಬಿಕೆಗೆ ಹೆಚ್ಚು ಮೌಲ್ಯ ನೀಡಿದ್ದಾರೆಂದೇ ಭಾವಿಸುತ್ತೇನೆ ಎಂದಿದ್ದಾರೆ.
ಅಪಪ್ರಚಾರ, ಚಾರಿತ್ರ್ಯ ಕೆಡಿಸುವ ಬಿಜೆಪಿಯ ಕೆಲಸ ಇಂದು ನಿನ್ನೆಯದಲ್ಲ. ಅವರ ಅಪಪ್ರಚಾರಗಳಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಅವರಿಗೆ ಅಪಪ್ರಚಾರ ಬಿಟ್ಟು ಬೇರೆ ದಾರಿಯಿಲ್ಲ. ಭ್ರಷ್ಟಾಚಾರ, ಅನಾಚಾರ, ಶೂನ್ಯ ಸಾಧನೆಗಳನ್ನು ಹಿಡಿದುಕೊಂಡು ಜನರ ಬಳಿ ಹೋಗಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಮೈತುಂಬಾ ಕಪ್ಪು ಬಳಿದುಕೊಂಡವರಿಗೆ ಬಿಳಿ ನೋಡಿದಾಗ ಅದಕ್ಕೂ ಕಪ್ಪು ಬಳಿಯೋಣ ಎಂದೆನಿಸುವುದು ಸಹಜ. ಸೋಲು, ಹತಾಶೆ, ಅಸಹಾಯಕತೆಯಿಂದ ಅವರು ಈ ರೀತಿಯ ಅಪಪ್ರಚಾರದಲ್ಲಿ ತೊಡಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಚಾಟಿ ಬೀಸಿದರು.