ಲಕ್ನೋ, ಡಿ 7 (DaijiworldNews/HR): 7 ವರ್ಷದ ಹಿಂದೆ ಸತ್ತೋಗಿದ್ದಾಳೆ ಎಂದು ಆಕೆಯ ಸಾವಿಗೆ ಕಾರಣನಾಗಿದ್ದಾನೆಂದು 7 ವರ್ಷದ ಹಿಂದೆ ವ್ಯಕ್ತಿಯೋರ್ವ ಜೈಲು ಸೇರಿದ್ದ. ಆದರೆ ಇದೀಗ ಕೊಲೆಯಾದವಳು 7 ವರ್ಷದ ಬಳಿಕ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ.
ಆಕೆಯನ್ನು ಕೊಲೆಮಾಡಿದ ಆರೋಪದಲ್ಲಿ ವಿಷ್ಣು ಎಂಬಾತನಿಗೆ ನ್ಯಾಯಾಲಯವು 7 ವರ್ಷಗಳ ಹಿಂದೆ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಮಹಿಳೆಯ ತಂದೆ ಆಗ್ರಾದಲ್ಲಿ ಅಪರಿಚಿತ ಶವವನ್ನು ತಮ್ಮ ಮಗಳು ಎಂದು ಗುರುತಿಸಿದ್ದರು.
ಇನ್ನು ಅಪ್ರಾಪ್ತೆಯನ್ನು ಅಪಹರಿಸಿ ಕೊಂದ ಆರೋಪ ಪ್ರಕರಣದಲ್ಲಿ ವಿಷ್ಣು ಜೈಲು ಪಾಲಾಗಿದ್ದ. ಈ ಮಧ್ಯೆ, ವಿಷ್ಣು ಅವರ ತಾಯಿ ತಮ್ಮ ಮಗನಿಗೆ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಹದಿಹರೆಯದವನಾಗಿದ್ದಾಗ ಮಹಿಳೆಯನ್ನು ಅಪಹರಿಸಿ ಕೊಂದ ಆರೋಪ ಹೊತ್ತಿದ್ದ ಮಗನಿಗೆ ನ್ಯಾಯ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮಹಿಳೆ ಸತ್ತಿಲ್ಲ. ಆಕೆ ಬದುಕಿದ್ದಾಳೆ. ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ ನನ್ನ ಮಗ ನಿರಪರಾಧಿ ಎಂದಿದ್ದರು.
ಇನ್ನು ವಿಷ್ಣು ತಾಯಿಯ ಅರ್ಜಿಯಂತೆ ಘಟನೆಯ ಕುರಿತು ತನಿಖೆಗೆ ಆದೇಶಿಸಿದಾಗ ಪೊಲೀಸರು ಮಹಿಳೆಯನ್ನು ಅಲಿಘರ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆಯ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಮಾಡಿಸಿದರು. ಮಹಿಳೆಯ ತಂದೆ ಆಕೆಯನ್ನು ತನ್ನ ಮಗಳು ಎಂದು ಗುರುತಿಸಿದ್ದಾರೆ.
ಅಸಲಿಗೆ ಆ ಮಹಿಳೆ ಅಪ್ರಾಪ್ತೆಯಾಗಿದ್ದಾಗ 7 ವರ್ಷದ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿ ಬೇರೆಡೆ ನೆಲೆಸಿದ್ದಳು ಪೊಲೀಸರ ಸಮಗ್ರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.