ನವದೆಹಲಿ, ಡಿ 07 (DaijiworldNews/DB): ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಏಕೈಕ ಮಂಗಳಮುಖಿ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಯ ಸುಲ್ತಾನ್ ಪುರಿ ಮಜ್ರಾ ಎ ವಾರ್ಡ್ನಿಂದ ಆಪ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಗಳಮುಖಿ ಅಭ್ಯರ್ಥಿ ಬೋಬಿ ಕಿನ್ನರ್ ಗೆಲುವಿನ ನಗೆ ಬೀರಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ದೆಹಲಿ ಪಾಲಿಕೆಗೆ ಮಂಗಳಮುಖಿಯೊಬ್ಬರು ಆಯ್ಕೆಯಾದಂತಾಗಿದೆ.
ಬೋಬಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವರುಣಾ ಢಾಕಾ ಅವರನ್ನು 6,714 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ. ತನ್ನ ಕ್ಷೇತ್ರದ ಸೌಂದರ್ಯವರ್ಧನೆ ಮತ್ತು ನೆರೆಹೊರೆಯವರ ಜೀವನ ಸುಧಾರಣೆ ತನ್ನ ಉದ್ದೇಶ. ಪಾಲಿಕೆಯಲ್ಲಿ ಭ್ರಷ್ಟಾಚಾರ ತೊಡೆದು ಹಾಕಲು ನಿರಂತರ ಶ್ರಮಿಸುತ್ತೇನೆ ಎಂದವರು ಹೇಳಿದ್ದಾರೆ.