ಮಧ್ಯಪ್ರದೇಶ, ಡಿ 07 (DaijiworldNews/DB): ಹಣ ಕಳವುಗೈದಿದ್ದಾಳೆಂದು ಶಂಕಿಸಿ ಐದನೇ ತರಗತಿ ವಿದ್ಯಾರ್ಥಿನಿಯನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ಬೆತುಲ್ನ ವಸತಿ ನಿಲಯವೊಂದರಲ್ಲಿ ನಡೆದಿದೆ.
ದಾಮ್ಜಿಪುರ ಗ್ರಾಮದ ಸರ್ಕಾರಿ ಗಿರಿಜನ ಬಾಲಕಿಯರ ವಸತಿ ನಿಲಯದಲ್ಲಿ ಹಣ ಕದ್ದಿದ್ದಾಳೆಂಬ ಶಂಕೆ ಮೇರೆಗೆ ಬಾಲಕಿಗೆ ಚಪ್ಪಲಿ ಹಾರ ಹಾಕಿ ಹಾಸ್ಟೆಲ್ ಆವರಣದಲ್ಲಿ ಮೆರವಣಿಗೆ ಮಾಡಲಾಗಿದೆ. ಅಲ್ಲದೆ ದೆವ್ವದಂತೆ ಕಾಣುವ ಮೇಕಪ್ ಮಾಡಲಾಗಿದ್ದು, ಇದರಿಂದ ಆಕೆ ಹಾಸ್ಟೆಲ್ಗೆ ಹೋಗಲು ನಿರಾಕರಿಸಿದ್ದಾಳೆ ಎಂದು ಬಾಲಕಿ ಕುಟುಂಬವರು ಜಿಲ್ಲಾಧಿಕಾರಿ ಅಮನ್ವೀರ್ ಸಿಂಗ್ ಬೈನ್ಸ್ ಅವರಿಗೆ ದೂರು ನೀಡಿದ್ದಾರೆ.
ಇನ್ನು ಬಾಲಕಿ ಕುಟುಂಬದವರ ದೂರಿನ ಮೇರೆಗೆ ವಿಚಾರಣೆ ನಡೆಸಿದಾಗ ಹಾಸ್ಟೆಲ್ನ ಅಧೀಕ್ಷಕಿ ಸೂಚನೆ ಮೇರೆಗೆ ವಿದ್ಯಾರ್ಥಿಗಳು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ನ ಅಧೀಕ್ಷಕಿ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಘಟನೆ ಸಂಬಂಧ ತನಿಖೆಗೆ ಆದೇಶ ಹೊರಡಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತೆ ಶಿಲ್ಪಾ ಜೈನ್ ತಿಳಿಸಿದ್ದಾರೆ.