ನವದೆಹಲಿ, ಡಿ 07 (DaijiworldNews/DB): ಕಿರಿಯ ಸಂಸದರಿಗೆ ಸಂಸತ್ತಿನ ಕಲಾಪದಲ್ಲಿ ಹೆಚ್ಚು ಅವಕಾಶ ನೀಡಬೇಕು. ಮುಂದಿನ ತಲೆಮಾರನ್ನು ಅಣಿಗೊಳಿಸುವುದಕ್ಕೆ ಇದು ಹೆಚ್ಚು ಪೂರಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಳಿಗಾಲದ ಅಧಿವೇಶನ ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಯಾಗಿ ನಡೆಯಬೇಕು. ಇದಕ್ಕೆ ಎಲ್ಲಾ ಪಕ್ಷಗಳೂ ಪ್ರಯತ್ನಿಸಬೇಕು. ಕಲಾಪ ನಡೆಯದಂತೆ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಕಿರಿಯ ಸಂಸದರ ಕಲಿಕೆಗೆ ಅಡ್ಡಿಯಾಗುತ್ತದೆ. ಎಲ್ಲಾ ಪಕ್ಷಗಳೂ ಕಿರಿಯ ಸಂಸದರಿಗೆ ಕಲಾಪವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಅವಕಾಶ ನೀಡಬೇಕು. ಮುಂದಿನ ತಲೆಮಾರನ್ನು ಪ್ರಜಾಪ್ರಭುತ್ವಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂದವರು ಪ್ರತಿಪಾದಿಸಿದರು.
ಜಿ20 ಕೇವಲ ರಾಜತಾಂತ್ರಿಕ ಕಾರ್ಯಕ್ರಮವಾಗಿ ಮುಂದುವರಿಯುವುದಿಲ್ಲ. ಪ್ರಪಂಚದೆದುರು ಭಾರತದ ಸಾಮರ್ಥ್ಯವನ್ನು ತೆರೆದಿಡಲು ಸಿಕ್ಕಿರುವ ಅಪೂರ್ವ ಅವಕಾಶ ಇದು ಎಂದು ಪ್ರಧಾನಿ ಮೋದಿ ಇದೇ ವೇಳೆ ಬಣ್ಣಿಸಿದರು.