ಬೆಳಗಾವಿ, ಡಿ 07( DaijiworldNews/MS): ಮಹಾರಾಷ್ಟ್ರ - ಕರ್ನಾಟಕ ರಾಜ್ಯದ ಗಡಿ ವಿವಾದ ನಡುವೆ ’ಮಹಾ’ ಸರ್ಕಾರವು ಕರ್ನಾಟಕಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ .
ಗಡಿಯಲ್ಲಿ ನಡೆಯುತ್ತಿರುವ ತಿಭಟನೆ ಬೆನ್ನಲ್ಲೇ ಪೊಲೀಸರ ಸಲಹೆ ಮೇರೆಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯು(ಎಂಎಸ್ಆರ್ಟಿಸಿ) ಈ ನಿರ್ಧಾರ ಕೈಗೊಂಡಿದೆ.
ಈ ಕುರಿತು ಮಾತನಾಡಿದ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ ಅವರು, "ಕರ್ನಾಟಕಕ್ಕೆ ಹೋಗುವ ಪ್ರಯಾಣಿಕರ ಸುರಕ್ಷತೆ ಮತ್ತು ಆಗಬಹುದಾದ ನಷ್ಟ ತಡೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಅವರು ಹೇಳಿದ್ದಾರೆ .
ಆದರೆ, ಬಸ್ ಸೌಲಭ್ಯ ಎಲ್ಲಿಯವರೆಗೆ ಸ್ಥಗಿತಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಮಹಾರಾಷ್ಟ್ರದಿಂದ ಕರ್ನಾಟಕವನ್ನು ಪ್ರವೇಶಿಸುವ ವಾಹನಗಳ ಮೇಳೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್ ಬೂತ್ ಬಳಿ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಕಾರ್ಯಕರ್ತರು ಪುಣೆ ನಗರದ ಸ್ವರ್ಗೇಟ್ ಪ್ರದೇಶದಲ್ಲಿ ಕನಿಷ್ಠ ಮೂರು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ಸುಗಳಿಗೆ ಕಪ್ಪು ಮಸಿ ಬಳಿದು 'ಜೈ ಮಹಾರಾಷ್ಟ್ರ' ಘೋಷಣೆಗಳನ್ನು ಬರೆದಿದ್ದರು.