ರಾಜಸ್ಥಾನ, ಡಿ 06 (DaijiworldNews/DB): ರಾಜಸ್ಥಾನದ ಜಲವಾರ್ನ ಬಿಜೆಪಿ ಕಚೇರಿ ಬಳಿ ಮಂಗಳವಾರ ಬೆಳಗ್ಗೆ ಭಾರತ್ ಜೋಡೋ ಯಾತ್ರೆ ಹಾದು ಹೋಗುವ ವೇಳೆ ಕಚೇರಿಯ ಚಾವಣಿ ಮೇಲೆ ಪಕ್ಷದ ಧ್ವಜ ಹಿಡಿದು ನಿಂತಿದ್ದ ಬಿಜೆಪಿ ಕಾರ್ಯಕರ್ತರೆಡೆಗೆ ರಾಹುಲ್ ಗಾಂಧಿಯವರು ಕೈ ಬೀಸಿ ಗಾಳಿಯಲ್ಲಿ ಮುತ್ತು ತೇಲಿ ಬಿಟ್ಟ ಪ್ರಸಂಗ ನಡೆಯಿತು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಈಗ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಮಂಗಳವಾರ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರ ತವರು ಕ್ಷೇತ್ರ ಜಲವಾರ್ ಪ್ರದೇಶದಲ್ಲಿ ಯಾತ್ರೆ ನಡೆದಿತ್ತು. ಈ ವೇಳೆ ಯಾತ್ರೆ ಜಲವಾರ್ ಬಿಜೆಪಿ ಕಚೇರಿ ಮುಂಭಾಗದಲ್ಲಿ ಹಾದು ಹೋಗುವ ವೇಳೆ ಕಚೇರಿಯ ಛಾವಣಿ ಮೇಲೆ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ನಿಂತಿದ್ದರು. ಅವರನ್ನು ನೋಡಿದ ರಾಹುಲ್ ಗಾಂಧಿ ಬಿಜೆಪಿ ಕಾರ್ಯಕರ್ತರತ್ತ ಕೈ ಬೀಸಿ ಅವರೆಡೆಗೆ ಗಾಳಿಯಲ್ಲಿ ಮುತ್ತು ತೇಲಿ ಬಿಟ್ಟ ಪ್ರಸಂಗ ನಡೆಯಿತು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್ ಸೇರಿದಂತೆ ಹಲವು ಸಚಿವರು, ಶಾಸಕರು ರಾಹುಲ್ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.