ಬೆಂಗಳೂರು, ಡಿ 06 (DaijiworldNews/DB): ಬಿಜೆಪಿ ನಾಯಕ ಸಿ.ಟಿ. ರವಿ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದ ಬೆನ್ನಿಗೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್ ಜೋರಾಗಿದೆ. ಮುಸಲ್ಮಾನರು ಧರಿಸುವ ಟೋಪಿಗಳನ್ನು ಧರಿಸಿರುವ ಬಿಜೆಪಿ ನಾಯಕರ ಫೋಟೋಗಳನ್ನು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಒಬ್ಬೊಬ್ಬರಿಗೆ ಒಂದೊಂದು ಹೆಸರನ್ನಿಟ್ಟು ಪ್ರಶ್ನಿಸಿದೆ.
ನಿನ್ನೆಯಷ್ಟೇ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಬಿಜೆಪಿ ಪಕ್ಷ ಕೂಡಾ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆಯಲು ಕಾರಣವನ್ನು ಸರಣಿ ಟ್ವೀಟ್ ಮಾಡಿತ್ತು.
ಇದೀಗ ಬಿಜೆಪಿಯ ಟ್ವೀಟ್ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿಯನ್ನು ಪ್ರಶ್ನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಫೋಟೋ ಹಾಕಿ ಇವರನ್ನು ಬೊಮ್ಮಾಯುಲ್ಲಾ ಖಾನ್" ಎಂದು ಕರೆಯಬಹುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮುಸಲ್ಮಾನರು ಧರಿಸುವ ಟೋಪಿಯನ್ನು ಧರಿಸಿರುವ ಫೋಟೋ ಹಾಕಿ ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ ಎಂದು ಕೇಳಿದೆ. ಸಚಿವ ಆರ್. ಅಶೋಕ್ ಮತ್ತು ಮತ್ತು ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರ ಫೋಟೋ ಹಾಕಿ ಇವರಿಗೆ "ಜಬ್ಬಾರ್ ಖಾನ್" "ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ ಸಿ.ಟಿ. ರವಿಯವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.